ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Saturday, December 18, 2010

ಸಂಕಷ್ಟಗಳೇ ಹೀಗೆ, ಒಂದರ ನಂತರ ಮತ್ತೊಂದು ....

..... ನಾಗೇಶರಾವ್ ಅವರಿಗಿಂತಲೂ ಐದು ವರ್ಷ ಚಿಕ್ಕವಳಾದ ತಂಗಿ ಜಾನಕಿ (ಜಾನೂ)ಗೆ 12 ವರ್ಷಕ್ಕೇ ಮದುವೆ! ಆ ಮದುವೆಯ ಸಂದರ್ಭದಲ್ಲೇ ನಾಗೇಶರಾವ್‍ಗೆ ಉಪನಯನವಾಗಿರುತ್ತದೆ. 13-14 ವರ್ಷದ ಹುಡುಗಿ ಪುಟ್ಟ ಕಂದಮ್ಮನನ್ನು ಹೆತ್ತ ಕೆಲವೇ ತಿಂಗಳಲ್ಲಿ ಅ
ನಾರೋಗ್ಯದಿಂದ
ಗಂಡ ತೀರಿಕೊಳ್ತಾರೆ. ಬೆಂಗಳೂರಿನಲ್ಲಿ ನೆಲೆ ಹೂಡಬೇಕೆಂಬ ಹಂಬಲದಿಂದ ತಿಂ
ಗಳಿಗೆ ಹತ್ತು ರೂಪಾಯಿ ಬಾಡಿಗೆಯ ಹೂವಮ್ಮನ ವಠಾರದ ಮನೆಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಈ ಸುದ್ದಿ.
ಎದ್ದೆನೋ, ಬಿದ್ದೆನೋ ಎಂದು ಊರಿಗೆ ಹೋಗಿ, ಆ ಪರಿಸ್ಥಿತಿಯನ್ನು ನಿಭಾಯಿಸಲು ನಾಗೇಶರಾವ್
ಹೆಣಗಾಡುತ್ತಾರೆ. ......



22 ಮಾರ್ಚ್ 1946


ಬೆಳಿಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆಯೇ ಎದ್ದೆ. ಎಷ್ಟೊತ್ತಾದ್ರೂ ವಾಸೂ ಆಗಲೀ, ಯಾರೇ ಆಗಲಿ ಬರ್ಲಿಲ್ಲ. ಭಾವ ನನ್ ಕಳ್ಸಿದ್ರು. ಕಾಫಿ ಕುಡಿದು ಸಿಟಿ ಬಸ್ನಲ್ಲಿ ಹೋಗಿ, ಸಿಟಿ ಬಸ್ನಲ್ಲಿ ಬಂದೆ. ಉಪ್ಪಿಟ್ಟು ತಿಂದು ಆಫೀಸಿಗೆ ಹೋದೆ. ಸೀನಾ ಬಂದಿದ್ದ. ಮರೆತು ಬೀಗದಕೈ ತೆಗೆದುಕೊಂಡು ಹೋಗಿದ್ರಿಂದ ಪ್ರಮಾದವೇ ಆಯ್ತು. ರಂಗಣ್ಣ ತುಮ್ಕೂರಿಂದ ಬಂದಿದ್ದ. ಹನುಮಂತರಾಯನ್ನ ಆಸ್ಪತ್ರೆಗೆ ಸೇರಿಸಿದಾರಂತೆ [ನಾಗೇಶರಾವ್ ತಂಗಿ ಜಾನೂ ಗಂಡ]. ನನಗೆ ಬಹಳ ಹೆದರಿಕೆಯಾಯಿತು. ಭಾವ ಹೋಗಲು ಅವರ ಕೋಟು ಬಟ್ಟೆಯೆಲ್ಲಾ ನಮ್ಮನೆಯಲ್ಲಿ ಸೇರಿತ್ತು.


23 ಮಾರ್ಚ್ 1946

ಬೆಳಿಗ್ಗೆ ಭಾವ ಹೊರಟೋದ್ರು. ಬಟ್ಟೆ ಒಕ್ಕೊಂಡೆ. ಮಾಧ್ವ ಯುವಕ ಸಂಘದ ಜವಾನ ಬಂದ. 8 ಆ. ಕೊಟ್ಟೆ. ಆಮೇಲೆ ಮನೆಗೆ ಹೋಗಿ ನೋಡಿದ್ರೆ ಬೀಗದ್ದೇ ಫಜೀತಿ. ಬೀಗ ಹಾಕಕ್ಕೂ ಬರಲ್ಲ, ತೆಗೆಯಕ್ಕೂ ಬರಲ್ಲ. ರಿಪೇರಿಗೆ ಹೋದೆ, 1 ಗಂ. ಬೇಕೂ ಅಂದ. ಮನಸ್ಸಿಗೆ ಬೇಜಾರಾಯ್ತು. ರಿಪೇರಿ ಮಾಡಿಸ್ಕೊಂಡು ಮನೆಗೆ ಬಂದಾಗ 11 ಗಂಟೆ. ಊಟ ಮಾಡಿ, City Bus ಹಿಡಿದು, ಓಡ್‍ಹೋದೆ.

ಸಂಜೆ 4ಕ್ಕೆ ಹೊರಡೋಣವೆಂದಿದ್ದೆ. ಅನಂತ್ಸುಬ್ರಾವ್ ಬೇರೆ ಕೆಲಸ ಹೇಳಿದರು. ಮಾಡೋದೋ ಬಿಡೋದೋ? ಅಂತೂ ಕೇಳಿಕೊಂಡು ಹೊರಟೆ.

ನಾನು ಬಂದ್ಮೇಲೆ ಕಾಳು ಕಟ್ಟಿಕೊಟ್ರು. Bagನಲ್ಲಿ ಹಾಕ್ಕೊಂಡು ಓಡಿದೆ. Stationಗೆ ಬಂದ್ರೆ ಎಷ್ಟೊತ್ತಾದ್ರೂ ರೈಲು ಹೊರಡ್ಲಿಲ್ಲ. Raghavan ಜತೇ ಸಿಕ್ರು. ಊರಿಗೆ ಬಂದ ತಕ್ಷಣ ಇಳಿದು ರಂಗನಾಥ ಹಾಲಿಗೆ ಬಂದೆ.

ಅಲ್ಲಿ ಮಾತಾಡ್ಸಿ, ನಾರಾಯಣಾವ್ರ ಜತೆಯಲ್ಲಿ ರಾಮಚಂದ್ರರಾಯರ ಅಂಗಡೀಗೆ ಬಂದೆ. ಅವರಿಗೆ ತಿಳಿಸಿ ಮನೆಗೆ ಬಂದೆ. ನಾರಾಯಣ ಮಾವ ಅಲ್ಲೇ ಇದ್ರು. ಜಾನೂ ಅಳ್ತಿದ್ಲು. ಅನ್ನ ಸೇರ್ಲಿಲ್ಲ. ಒಂದೇ ಉಸಿರಿಗೆ ಆಸ್ಪತ್ರೆಗೆ ಹೋದೆವು. ಅಮ್ಮಂಗೆ ಜ್ಞಾನ ಇಲ್ಲ. ಅವಳ್ನೂ ನೂಕ್ಕೊಂಡು ಅತ್ತ ಕಡೆ ತಿರುಗಿ ನೋಡದೆ ಹಿಡ್ಕೊಂಡು ಬಂದೆ. ಜ್ಞಾನ ತಪ್ಪಿತು. ಅಳು ಹೆಚ್ಚಿತು. ಸಾಧ್ಯವಿಲ್ಲವೆಂದು ಸುಂದರಮ್ಮನೋರಿಗೆ ಹೇಳಿ ಕಳ್ಸಿದೆ. ಅವ್ರು ಬಂದು ಕಷ್ಟ ಪಟ್ಟು ಎಲ್ರಿಗೂ ಸಮಾಧಾನ ಮಾಡಿದ್ರು. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯಿಲ್ಲ. ಸಮಾಧಾನವಿಲ್ಲ. ಇಂದಿಗೆ ಹನುಮಂತರಾಯನ ಕಥೆ ಮುಗಿಯಿತು. ದೂರ, ಕಾಣದ ಕಡೆ ತಪ್ಪಿಸಿಕೊಂಡು ಹೊರಟು ಹೋದ.

ನಾನು ಬರದಿದ್ರೆ, ಅಮ್ಮನ ಗತಿ!?

24 ಮಾರ್ಚ್ 1946

ಬೆಳಿಗ್ಗೆ ಸುಂದರಮ್ಮನವ್ರು ಹೊರಟೋದ್ರು. ಕಾಫಿ ಮಾಡಿ ಕಳಿಸುವುದಾಗಿ ಹೇಳಿದ್ರು. ಅಮ್ಮಾವ್ರು ಮತ್ತೆ ರಾಗ ತೆಗೆದ್ರು. ಜಟಕಾ ಬಂದ ಮೇಲೆ ಕೂತು ಹೋಗಿ ಆಸ್ಪತ್ರೇಲಿ ಮುಖ ನೋಡಿದ್ದಾಯ್ತು. ಅಬ್ಬಾ ಎಷ್ಟು ಅಸಹ್ಯ, ಉಗ್ರ, ಕ್ರೂರ! ಆ ಎಳೆನಗೆಯ ಪ್ರಸನ್ನ ಮುಖವೆಲ್ಲಿ? ಅಮ್ಮಾವ್ರು ಅತೂ ಕರೆದೂ ಒದ್ದಾಡಿದರು. ಮನೆಗೆ ಬಂದಿದ್ದಾಯ್ತು. ಮನೇ ದುಃಖ ಹೇಳತೀರದು. ರಾಘೂಗೆ, ಪುಟ್ಟೂಗೆ ಕಾಗ್ದ ಬರೆದೆ. Officeಗೆ ಕಾಗದ ಬರೆದು Post ಮಾಡಲು ಕೊಟ್ಟೆ. ಮಧ್ಯಾಹ್ನ ರಾಜಣ್ಣ ಬಂದಿದ್ದ. ಆಮೇಲೆ ಅನಂತ, ಶರ್ಮ ಬಂದಿದ್ರು. ಅವ್ರೂ ಪೇಚಾಡಿದ್ರು.

ಜಾನೂಗೆ ಜ್ವರಾ ಎಂದು ವೆಂಕಟ್ರಾವ್ ಹತ್ರ ಔಷಧಾ ತಂದೆ. ಅವನೂ ಕೇಳಿ ಪೇಚಾಡಿದ. ಎಷ್ಟು ಅತ್ರೇನು? ಜಾನೂನ ಕರ್ಮಕ್ಕಾಗಿ ಕಳಿಸಲು ಅಮ್ಮಂಗೆ ದುಃಖ. ಮಾಡತಕ್ಕದ್ದೇನು? ನಾಣ ಮಾವನ ಮುಂದೆ ಮಾತಾಡ್ತಾ ಇರೋವಾಗ ನನಗೆ ತಿಳಿಯದೆಯೇ ದುಃಖ ಉಕ್ಕಿ ಉಕ್ಕಿ ಬಂತು.

25 ಮಾರ್ಚ್ 1946
ಬೆಳಿಗ್ಗೆ ರಾಮಚಂದ್ರರಾಯರ ಅಂಗಡಿಗೆ ಹೋದೆ. ಅವರು ಬಹಳ ಪೇಚಾಡಿಕೊಂಡ್ರು. 3 ಕಾರ್ಡು ತೆಗೆದುಕೊಂಡು ಬೆಂಗಳೂರು, ತಿಪ್ಪಗೊಂಡನಹಳ್ಳಿ, ರಾಘವ ಇವರಿಗೆ ಹಾಕಿದೆ. ಗುಂಡೂರಾವ್ ಅಂಗಡಿಯಲ್ಲಿ ಜೋಯಿಸ್ ಸಿಕ್ಕಿದ್ರು. ನಾಗರಾಜರಾಯ ಸಿಕ್ಕಿದ್ದ. ಅವನಿಗೂ ವಿಚಾರ ಹೇಳಿದೆ. ಪೇಚಾಡಿಕೊಂಡ.

ಸಂಜೆ ಬಂಡನ ಜತೇಲಿ Walking.

ರಾತ್ರಿ ಭಾವ ಬಂದ್ರು. ಪ್ರಹ್ಲಾದನಿಗೆ ಗೊತ್ತಾದೀತೂಂತ ಶಾಸ್ತ್ರಿಗಳಿಗೆ ಭಾವ ಕಾಗದ ಬರೆಸಿ ಕೊಂಡು Mail ಕಾಯಕ್ಕೆ ಲಕ್ಷ್ಮಿನಾರಾಯಣನ ಜತೇಲಿ ಹೋದ್ರು. ಅದು 3 hrs. Late ಅಂತೆ. ಬೆಳಿಗ್ಗೆ ಹಾಕಿದ್ದಾಯ್ತು.

26 ಮಾರ್ಚ್ 1946

ಬೆಳಿಗ್ಗೆ ಎಲ್ಲರೂ ನೀರು ಹಾಕಿಕೊಂಡಿದ್ದಾಯ್ತು. ಸುಂದರನ ಪಂಚೆ, ಶರ್ಟು ತರಿಸಿಕೊಂಡೆ. ಮಗುವನ್ನು ವೆಂ.ರಾವ್ ಗೆ ತೋರಿಸಿ ಔಷಧ ತಂದಿದ್ದಾಯ್ತು. ರಾತ್ರಿ Exercise Books ಗಂಟು ಕಟ್ಟಿದೆ.

27 ಮಾರ್ಚ್ 1946

ಬೆಳಗಿನ ಜಾವ ಅಮ್ಮಾವ್ರು ಬೆಂಗಳೂರಿಗೆ ಹೋದ್ರು, Mail Trainನಲ್ಲಿ. ನನಗೆ 1 trunk ತೆಗೆದುಕೊಂಡು ಹೋಗಬೆಕಾದ್ರೆ ಸಾಕು ಸಾಕಾಯಿತು. ಭಾವನ ಕೈಲಿ 5 ರೂ. ಕೊಟ್ಟೆ ಛಾರ್ಜಿಗಾಗಿ. ಬೀಗ ಸಿಕ್ಕಿ ಹಾಕಿಕೊಂಡು ಫಜೀತಿಯಾಯ್ತು. Post Officeಗೆ ಹೋಗಿ Registered ಕಾಗದ ಹಾಕಿದೆ. ರಾಘು ಇಂದ ಕಾಗದ ಬಂತು. ನಾರಾಯಣ ಸಿಕ್ಕು ಕಾಫಿ ಕೊಡಿಸಿದ. ಗಣೇಶ, ರವೀಂದ್ರ ಸಿಕ್ಕಿದ್ರು. ಡಿ.ರಾಮರಾಯರೂ ಕಂಡು ಪೇಚಾಡಿಕೊಂಡ್ರು.
Editor Delhiಗೆ ಹೋದ ವಿಷಯ ‘Daily News’ನಲ್ಲಿ ಓದಿದೆ. ‘ತಾಯಿನಾಡು’ ಸಿಗಲಿಲ್ಲ. Sreenivasa Rao CFd. Officeಗೆ ಹೋಗಿದ್ದೆ. ಇವತ್ತಿನ Paper 8 Pages.
ಪುಟ್ಟು ಬಂದಳು. ಸಂಜೆ Stationಗೆ ಹೋಗಿದ್ದೆವು. Dr.Royanಗಾಗಿ ಸರಿಯಾಗಿ ಬಂದ Poona Train 1 ಗಂಟೆ ಲೇಟಾಗಿ ಹೊರಟಿತು. ಅನಂತನ ಜತೇಲಿ ಅವರ ಮನೆಗೆ ಹೋಗಿದ್ದೆ. ಅಮ್ಮಾವ್ರು ಬಂದಿದ್ರು. ಮಧ್ಯಾಹ್ನ ಗುಂಡೂರಾವ್ ಸಿಕ್ಕಿದ್ರು. ಅವರಿಗೆ ವಿಚಾರವೇ ಗೊತ್ತಿರ್ಲಿಲ್ವಂತೆ.
28 ಮಾರ್ಚ್ 1946
ಬೆಳಿಗ್ಗೆ ಎದ್ದು ಗುಂಡೂರಾವ್ ಅಂಗಡಿಗೆ ಹೋದೆ. ಅಲ್ಲೇ ಮಾತಾಡ್ತಾ ಕೂತಿದ್ದೆ. ಹನುಮಂತರಾವ್ ಬಂದು ಪೇಚಾಡಿದ. ಮಧ್ಯಾಹ್ನ Officeಗೆ ಬರೆಯಲು ಕವರ್ ತಂದೆ, ಸಾಧ್ಯವಾಗಲಿಲ್ಲ.
29 ಮಾರ್ಚ್ 1946
ಬೆಳಿಗ್ಗೆ Officeಗೆ ಕಾಗದ ಬರೆದುಹಾಕಿದೆ. ನಾನೂ ಅಮ್ಮ ಬೆಳಿಗ್ಗೆ ಅಷ್ಟೊತ್ತಿಗೇ Suboverseer ಮನೆಗೆ ಹೋಗಿದ್ದೆವು. ಮಧ್ಯಾಹ್ನ ಮಲ್ಲಣ್ಣ ಸಿಕ್ಕಿದ್ದ. Cycle Shopಗೆ ಹೋಗಿ ರಿಪೇರಿ ಮಾಡಲು ಹೇಳಿದೆ.
ಸಂಜೆ ಅನಂತ ಸಿಕ್ಕಿದ್ದ. ಗುಂಡಪ್ಪ ಸಿಕ್ಕಿದ್ದ. C.S.ರಾಜಾರಾವ್ ಸಿಕ್ಕಿದ್ದ. ರಾಮು ಮದುವೇ ಮನೆಗೆ ಹೋಗಲಿಲ್ಲ. ಸಾವಿತ್ರಮ್ಮನವರು ಸಿಕ್ಕು ಪೇಚಾಡಿಕೊಂಡರು. ರಾತ್ರಿ Cycle Shop ತೆಗೆದಿರ್ಲಿಲ್ಲ. ಸಂಪತ್ತು ಬಂದಿದಾನೆ. ಅಮ್ಮ ದುಡ್ಡಿನ ವಿಚಾರ ಲೆಕ್ಕಾಚಾರ ಕೇಳಿ ಬಹಳ ಪೇಚಾಡಿಕೊಂಡಳು.
30 ಮಾರ್ಚ್ 1946
ಬೆಳಿಗ್ಗೆ ಶಂಕರರಾಯರು Death Certificateಗೆ Appln. Draft ಮಾಡಿಕೊಟ್ರು. Court Fee Stampಗಾಗಿ ಪರದಾಟ! Associationಗೆ ಹೋಗಿದ್ದೆವು. Town Cafeನಲ್ಲಿ ಒಲ್ಲದ ಬೆಲ್ಲದ ಕಾಫಿ! ಬೆಳಗ್ನಿಂದ Cycle Shop ಬಾಗಿಲು ತೆಗೆದಿಲ್ಲ. Court Stampಗೆ ಬದಲಾಗಿ Receipt Stamp ತಂದೆ. ಮಧ್ಯಾಹ್ನ ಪುನಃ ಹೋದೆ. Foolscap ಕಾಗದ ಇಲ್ಲದೆ ಬಹಳ ಒದ್ದಾಡಿದೆ. ಮಾಧವ ಸಿಗಲಿಲ್ಲ. ವೆಂಕಟ್ರಾಮು ಸಿಕ್ಕ. High Schoolಗೆ ಹೋದೆವು.

Friday, December 17, 2010

ಕಳೆದು ಹೋದ ಹೊಸ ಮನೆ ಬೀಗದಕೈ

...... ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಬೆ
ಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. .....

16 ಮಾರ್ಚ್ 1946

ಬೆಳಿಗ್ಗೆ ವಾಸುದೇವರಾವ್ Phone ಮಾಡಿ ದುಡ್ಡು ಕೇಳಿದರು, ಕೊಡ್ತೀನೆಂದೆ. ಸ್ವಲ್ಪ ಹೊತ್ಗೇ Manager ಕೂಗಿದ್ರು. ಈ ಸಾರಿ Allowance ಅಂತ ಹೇಳಿ ಇನ್ನೈದು ರೂ. ಕೊಟ್ಟಿದ್ದಾರೆ. ಕಾಫಿ ಕೊಡ್ಸಿ ಚಿಲ್ಲರೆ ಮಾಡ್ಸಿದೆ. ವಾಸುದೇವರಾವ್‍ಗೆ 2 ರೂ. ಕೊಟ್ಟೆ. Driverಗೆ ಲಾಟರಿ ಬಾಬ್ತು ಎಂಟಾಣೆ ಕೊಟ್ಟೆ. ಸಂಜೆ ಹೊಸ Formನಲ್ಲಿ Details Fill up ಮಾಡಿಸಿಕೊಂಡ್ರು. ಎ.ಸುಂದರರಾಜಾರಾಯರ Death News Receive ಮಾಡಿದೆ.

10 ನಿ. Typeಗೆ ಹೋಗಿದ್ದೆ. ಇವತ್ತು Narayan ಬಂದಿಲ್ಲ.

ಸಂಜೆ ಸೀನನಿಗೆ ವಡೆ, ಕಾಫಿ ಕೊಡ್ಸಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ. ವಾಸು ಸಿಕ್ಕಿದ್ದ.

17 ಮಾರ್ಚ್ 1946

ಅಕ್ಕನಿಗೆ ಕೊಡಬೇಕಾದ 20 ರೂ. ಕೊಟ್ಟುಬಿಟ್ಟೆ. ಸೀದಾ ಸ್ಟೇಷನ್ನಿಗೆ ಹೋದೆ. ದಾರಿ ಉದ್ದಕ್ಕೂ ಬಣ್ಣದ ಕಾಟ. ಹೋದ ತಕ್ಷಣ ಬಸ್ ಬಂತು. ಬರ್ತಾ ದಾರೀಲಿ ಆಫೀಸಿನ ರಾಮಾಚಾರ್ ಸಿಕ್ರು, ಮಾತಾಡ್ಸ್ಲಿಲ್ಲ. ಅಂಬಾಭವನ್‍ನಲ್ಲಿ ದೋಸೆ, ಕಾಫಿ. ಅಲ್ಲಿಂದ ಗುಂಡನ ಮನೆಗೆ ಬಂದೆ. ರಾಮಾಚಾರ್ರಿಗೆ ಮೈಗೆ ಚೆನ್ನಾಗಿಲ್ಲ. ಮತಿಘಟ್ಟ ಕೃ. ಮೂರ್ತಿ ಮನೇಗೆ ಹೋಗ್ತೀಯಾಂದ್ರು, ಸುಮ್ಮನಿದ್ದೆ. ಗುಂಡ Doctor Shopಗೆ ಕರ್ಕೊಂಡು ಹೋದ.

ಕಾಮನಹಬ್ಬದ ಗಲಾಟೆ ಪ್ರಯುಕ್ತ ಸಂಜೆ ತನಕ ಚಲಿಸಲೇ ಇಲ್ಲ. ಮನೇಲಿ ಕೂತು ಪಟಗಳಿಗೆ ಕಟ್ಟು ಹಾಕಿದೆ. ಅಮೃತೂರಿಗೆ, ತುಮಕೂರಿಗೆ ಭಾವ ಕಾಗದ ಬರೆಸಿದರು. ಸಂಜೆ Reading Roomಗೆ ಹೋಗಿ ಬಂದೆ. ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಭಾವ 5 ರೂ. ಈಸಿಕೊಂಡು ಹೋದರು. ನಾಳೆ ಅಮ್ಮಾವ್ರು ಬರ್ತಾರಂತೆ.

18 ಮಾರ್ಚ್ 1946

ಬೆಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. ಆಮೇಲೆ ರಾಘವನ ಮನೆಗೆ ಹೋದೆ. ಅವನಿಗೆ ಅವನ 3 ರೂ. ಕೊಟ್ಟೆ.

JAIHIND ತಂದೆ. ಗುಂಡನಿಗೆ ಪೇಪರ್ ಬೇಕೂಂದಿದ್ದ. ನಾನು ಇಲ್ಲಾಂದೆ. ಅವನೂ ಸರಿಯೇ ಆಯ್ತು ಅಂದ. ತಂಗಳನ್ನ ಊಟ ಮಾಡಿ ಹೊರಟೆ. Officeಗೆ ಹೋದಾಗ 11 1/2 ಆಗಿತ್ತು.

Proprietor, Weeklyಗೆ Science Articles ಬರೀರೀಂತ ಹೇಳಿದ್ರು. ಆಗ್ಲೀಂದೆ. ಕೆಲವು Interesting Articles Translate ಮಾಡಿದೆ.

5 ರೂ. ಮುರಿಸಿದೆ. ಸಂಜೆ 5 ಗಂಟೇ ಹೊತ್ತಿಗಾಗಲೇ ಹೊರಟು ಬಂದು Stationಗೆ ಹೋದೆ. ದಾರೀಲಿ `ದೇಶಬಂಧು'ಗೆ Article Post ಮಾಡಿದೆ. 1 ಗಂ. ಕಾದ ಮೇಲೆ ಅಮ್ಮನ ಬಸ್ ಬಂತು. ದಾರೀಲಿ ಬೇರೆ 1 ಗಂ. ಆಯ್ತು. 3ನೇ ಕ್ರಾಸ್ ಹತ್ರ ಇಳಿದು ಸಾಮಾನು ತಂದೆವು.

19 ಮಾರ್ಚ್ 1946

ಕೆಲವು ಪಟಗಳನ್ನು ಜೋಡಿಸಿದೆ. ಸಂಜೆ ವಾಸೂ ಸಿಕ್ಕಿದ್ದ. ಕಾಫೀ ಕೊಡೀಸ್ತೀನೀಂದೆ. ಬರ್ಲಿಲ್ಲ.

20 ಮಾರ್ಚ್ 1946

ಮಧ್ಯಾಹ್ನ ವ್ಯಾಸರಾಯ್ರು ಬಲಾತ್ಕಾರದಿಂದ ಮಜ್ಜಿಗೆ ಕೊಡಿಸಿದ್ರು. ರಾತ್ರಿ ಮನೇಗೆ ಬರೋ ಹೊತ್ಗೆ ಅಮ್ಮಾವ್ರು ಮನೇಲಿರ್ಲಿಲ್ಲ. ರಾಘೂ ಕಾಗದ ಬರೆದಿದ್ದಾನೆ, ತಲುಪಿದ್ದಕ್ಕೆ. ಸಂಜೆ ಭಾವನೆದುರಿಗೆ ಮನೆಯೋಳು ಬಾಡಿಗೆ ಕೇಳಿದಳು.

21 ಮಾರ್ಚ್ 1946

ಕಾಫಿ ಕುಡಿಯದೆ ಹೊರಟಾಗ ಸೋಮ ಸಿಕ್ಕು Juice ಕೊಡಿಸಿದ. ಆಮೇಲೆ ಸಂಪತ್ತು ಬಂದಿದ್ದ. ಸಂಜೆ ಅವನ ಜತೇಲಿ ಕಾಫಿ, walking. Cubbon Park ಎಲ್ಲಾ ಸುತ್ತು ಹಾಕಿದ್ದಾಯ್ತು. ಅವನ ಜತೆ ಮತ್ತೆ ಕಾಫಿ. ಸೀನ ಸಿಗಲಿಲ್ಲ. ರಾತ್ರಿ ಮಳೇ ಬಂತು. ಸಿಟೀ ಬಸ್ಸಲ್ಲಿ ಬಂದ್ರೂ ಸಿಕ್ಕಿ ಹಾಕಿಕೊಂಡೆ. ಶೇಷಾದ್ರಿಪುರಕ್ಕೆ ಬಂದ ಮೇಲೆ ಪೂರಾ ನೆನೆದೆ, ಮೋರಿ ತುಂಬಿ ಹರೀತಿತ್ತು. ರಾಯರ ಗುಡಿ ಹತ್ರ ಬರೋ ಹೊತ್ತಿಗೆ ಪೂರ್ತಿ ಒದ್ದೆ ಮುದ್ದೆ ಆದೆ. ಭಾವ ಬಂದಿದ್ರು. ಅವ್ರೂ, ನಾನೂ, ಸೀನಣ್ಣ ಹೋಗಿ ಹೊಸ ಮನೇಲಿ ಮಲಗಿದೆವು. ಈ ಮಳೇಲೇನಾದ್ರೂ ಅಮ್ಮ ಬಂದು ಮಳೇಗೆ ಸಿಕ್ಕಿದ್ರೆ ಗತಿ ಏನೂಂತ ಬಹಳ ಪೇಚಾಟ ಆಯ್ತು. ರಾಘೂ ಇಂದ ಇವತ್ತು ಕಾಗದ ಬಂದಿದೆ.


Thursday, December 16, 2010

ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು

.... ಮೂವತ್ತು ರೂಪಾಯಿ ತಿಂಗಳ ಸಂಬಳದ ಕೆಲ್ಸ ಸಿಗತ್ತೆ. ಜೂನಿಯರ್ ಮೋಸ್ಟ್ ಸಬ್ ಎಡಿಟರ್‌ಗೆ ಕಚೇರಿಯಲ್ಲಿ ಫೋನ್ ಮೂಲಕ ವಾರ್ತೆಗಳನ್ನು ಸ್ವೀಕರಿಸಿ ಬರೆಯಬೇಕು, ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಪ್ರೂಫ್ ನೋಡಬೇಕು, ಯಜಮಾನರು ಇಂಗ್ಲಿಷ್‍ನಲ್ಲಿ ಬರೆದ ಆರ್ಟಿಕಲ್‍ಗಳನ್ನು ಟ್ರಾನ್ಸ್-ಲೇಟ್ ಮಾಡ್ಬೇಕು, ಬುಕ್ಸ್ ರೆವ್ಯೂ ಮಾಡ್ಬೇಕು. ಕಾಫಿ ಕುಡಿಯೋಕ್ಕೆ ಕಾಸಿಲ್ಲದ ಕಾಲ, ಸಂಬಳ ಎಂದು ಬರತ್ತೋ ಎಂದು ಕಾಯುವ ಕಾಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದನ್ನು ಬೇಗ ಮಾಡು ಅಂತ ಅಮ್ಮನ ಒತ್ತಾಯ. ಶ್ರೀರಾಮಪುರ(?)ದ ಹೂವಮ್ಮನ ಮನೆ ವಠಾರದಲ್ಲಿ ಹತ್ತು ರೂಪಾಯಿ ಬಾಡಿಗೆಗೆ ಮನೆ ಸಿಗತ್ತೆ. ಊಟದ Aluminium ತಟ್ಟೆಗೆ ರೂ.1-11-0 ಕೊಡ್ಬೇಕಲ್ಲ ಅಂತ ಸಂಕಟ ಆದ್ರೂ ಖರೀದಿ ಮಾಡಿದ್ದಾಯ್ತು. ಹಾಗೆ ಬರ್ತಾ ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು ಕೊಡೋ ಬದಲು ಒಂದಾಣೆ ಕೊಟ್ಟು ಜಹಾಂಗೀರ್ ತಿನ್ನೋದು ವಾಸಿ ಅನ್ಸತ್ತೆ. ...

01 ಮಾರ್ಚ್ 1946

ಸೀನಾ Paperದು 1-6-0 ಕೊಟ್ಟ. ಅವನಿಗೆ ಕಾಫಿ ಕೊಡಿಸಿದೆ. Type. ಚಕ್ಕರ್.

02 ಮಾರ್ಚ್ 1946

ಶಿವರಾತ್ರಿ. ರಾಘವ ಸಿಗಲಿಲ್ಲ. ಸಂಜೆ ರವೀಂದ್ರ ಸಿಕ್ಕಿದ್ದ. ಸುಂದರ, ಗುಂಡ ಸಿಕ್ಕಿದ್ದು, ನಾಳೆ ಸಿಗ್ತೀನೆಂದೆ.

03 ಮಾರ್ಚ್ 1946

ಬೆಳಗ್ಗೆ ಏಳೋ ಹೋತ್ಗೆ ಶ್ರೀಪಾದು ಬಂದು ಕಕ್ಕ ಬಂದೀದಾರೇಂತ ಹೇಳಿದ. ಅಮ್ಮ ನಾಳೆ ಬರ್ತಾಳಂತೆ. ತೋಟ 850ಕ್ಕೆ ಖರೀದಿ, ಮೂರು ತಿಂಗಳಾದ ಮೇಲೆ ಬಡ್ಡೀನೂ ಸೇರಿಸಿ ಕೊಡ್ತಾರಂತೆ.

ರಾಘವ ಸಿಗಲಿಲ್ಲ. ಬಟ್ಟೆ ಒಕ್ಕೊಂಡೆ. ಮಧ್ಯಾಹ್ನ ಸುಂದರ ಬಂದಿದ್ದ. ಸಂಜೆ Cubbon Parkಗೆ Walking ಹೋಗಿದ್ದೆವು. 1 ಬ್ಲೇಡ್ ತಂದೆ.

ಹೂವಮ್ಮನ ಮನೇಲಿ 1 ಮನೆ ಇದೆಯಂತೆ. 10 ರೂ. ಬಾಡಿಗೆ.

04 ಮಾರ್ಚ್ 1946

ಬೆಳಿಗ್ಗೆ Shave ಮಾಡಿಕೊಳ್ಳೋಕೆ ಹೋದೆ, ಕಿವಿ ಹೆರ್ಕೊಂಡೆ.

ಕೆಲವು Books Review ಮಾಡಿದೆ.

ಸೀನ ಇನ್ನೂ ಬಂದಿಲ್ಲ. ಸಂಜೆ ರಾಘ್ವ ಸಿಕ್ಕಿದ್ದ, ದೋಸೆ ಕಾಫಿ ಕೊಡಿಸಿದ, Amba Bhavanನಲ್ಲಿ - ಬೆಲ್ಲಾ ಇಲ್ಲೂ! ಮನೇಗೆ ಬರೋ ಹೊತ್ಗೆ ಅಮ್ಮಾ ಬಂದು ಎಲ್ಲೋ ಹೋಗಿದ್ಲು. ನಂಜುಂಡಣ್ಣಂಗೆ Phone ಮಾಡಿದ್ದೆ, ಇರಲಿಲ್ಲ. Type ಚಕ್ಕರ್.

05 ಮಾರ್ಚ್ 1946

ಅಮ್ಮ ಇವತ್ತು ದುಡ್ಡಿನ ಲೆಕ್ಕಾಚಾರ ಮಾಡಿದಳು. 40 ರೂ. ನನ್ನ ಕೈಗೆ ಕೊಟ್ಟಳು. ನನಗೆ ಜೀವ ಬಂದ ಹಾಗಾಯ್ತು. ರಾಘವನ ಮನೆಗೆ ಹೋಗ್ಲಿಲ್ಲ. ಇವತ್ತು ನಂಜುಂಡಣ್ಣಂಗೆ Phone ಮಾಡ್ದೆ, ಇರ್ಲಿಲ್ಲ. Whitefieldಗೆ ಹೋಗಿದಾನಂತೆ. ಬೆಳಿಗ್ಗೆ ಖಲೀಲ್ ಸಿಕ್ಕಿದ್ದ, ಸಂಜೆ ಸೀನ ಸಿಕ್ಕಿದ್ದ.

06 ಮಾರ್ಚ್ 1946

ಅಮ್ಮ ಬೆಳಿಗ್ಗೆ ಊರಿಗೆ ಹೋದಳು. Bus Stop ಹತ್ರ ಅವ್ಳನ್ನ ಕೂಡಿಸಿ ಕಾಫಿ ತೆಗೆದುಕೊಂಡು ಬಂದು ಕೊಟ್ಟೆ. ಆಮೇಲೆ ರಾಘ್ವನ ಮನೆಗೆ ಹೋದೆ. ದುಡ್ಡು ಕೇಳಿದೆ. ಸಂಜೆ Office ಹತ್ರ ಬಾಂದ. ಅಗಸನಿಗೆ ಬಟ್ಟೆ ಹಾಕಿದ್ದಾಯ್ತು. ದುಡ್ಡಿಲ್ದೇ ಕಾಫಿ ಕುಡೀತಿಲ್ಲ.

Food Plan for India ಅನ್ನೋ Article Translate ಮಾಡ್ತಿದೀನಿ.

ಖಲೀಲ್ ಸಿಕ್ಕಿದ್ದ. ಸಂಜೆ ನಂಜುಂಡಣ್ಣನೇ Phone ಮಾಡಿದ. ಇನ್ನೂ Transfer ವಿಚಾರ ಗೊತ್ತಿಲ್ಲ. ನಂಜುಂಡಣ್ಣನ ಮನೇಲಿ ಮಾತಾಡ್ತಾ ಕೂತಿದ್ದೆ. ಆಮೇಲೆ ಗಿರೀ ಜತೇಲಿ ಬಂದೆ ಮಾತಾಡ್ಕೊಂಡು. ಕೃಷ್ಣರಾವ್‍ಗೆ ಕಾರ್ಡು ಬರೆದೆ.

07 ಮಾರ್ಚ್ 1946

ಬೆಳಿಗ್ಗೆ ರಾಘವನ ಮನೆಗೆ ಹೋಗಿದ್ದೆ. ಅವನ್ಹತ್ರ ಮೂರು ರೂ. ಸಾಲ. ಆಫೀಸಿಗೆ ಹೋಗೋವಾಗ ಚಂದ್ರಪ್ಪ ಸಿಕ್ಕಿದ್ದ.

ಯಜಮಾನ್ರ Temple Civilization ಅನ್ನೋ Article Translate ಮಾಡಿದೆ.

ಪಿಳ್ಳೇಗೆ ಕಾರ್ಡು ಬರೆದೆ. ರಾಘೂಗೆ ಪೆರಿಯಾಪಟ್ಟಣಕ್ಕೆ Transfer ಆಗಿದೇಂತ ನಂಜುಂಡಣ್ಣ Phone ಮಾಡಿದ್ದ.

08 ಮಾರ್ಚ್ 1946

ಮನೇಗೆ 15 ರೂ. ಕೊಟ್ಟೆ.

09 ಮಾರ್ಚ್ 1946

ರಾಘ್ಹವ ಬಂದಿದ್ದ ಆಫೀಸ್ ಹತ್ರ. ಅಮ್ಮನಿಂದ ಕಾಗದವೇ ಇಲ್ಲ. ರಾಘೂಗೆ ಇನ್ನೂ ಕಾಗದ ಬರೀಲಿಲ್ಲ.

10 ಮಾರ್ಚ್ 1946

ಬೆಳಗ್ಗೆ ಎಷ್ಟು ಹೊತ್ತು ಕಾದ್ರೂ ಆಚಾರ್ರು ಬರಲಿಲ್ಲ. ಸರಿ, ಹಸುವಿನ ಗಂಜಳ ಹಾಕಿ ಸಾರಿಸಿದ್ದಾಯ್ತು. ಒಂದೊಂದಾಗಿ ಸಾಮಾನು ಸಾಗಿಸಿದ್ದಾಯ್ತು. ಅಮ್ಮನಿಂದ ಕಾಗದ ಬಂತು. ಮುಂದಿನ ಸೋಮವಾರ ಬರ್ತಾಳಂತೆ.

11 ಮಾರ್ಚ್ 1946

ಬೆಳಿಗ್ಗೇ ಏಳೋದು ನಿಧಾನ ಆಯ್ತು.

ಇವತ್ತು ಬ್ರಾಹ್ಮಣ ಸಮ್ಮೇಳನದ Article Translate ಮಾಡಿದೆ. Food Article ಮುಗೀತು.

ಮನೇಗೆ ಬರೋ ಹೊತ್ಗೆ ರಾಘೂ ಬಂದಿದ್ದ. ಅವನ್ ಸಾಮಾನೆಲ್ಲಾ ಹೊಸ ಮನೆಗೆ ಹಾಕಿದ್ದ. ಸಂಜೆ ಸೀನಣ್ಣ ಸಿಕ್ಕಿದ್ದ. ಅಕ್ಕಿಪೇಟೆಗೆ ಹೋಗೂಂದಿದ್ರು. ಹೋಗ್ಲಿಲ್ಲ.

12 ಮಾರ್ಚ್ 1946

ಬೆಳಿಗ್ಗೆ ಅಗಸನ ಮನೆಯಿಂದ ಬಟ್ಟೆ ತಂದೆ. ತಿರುಗಿ ಬಟ್ಟೆ ಹಾಕಿದೆ. ಸಂಜೆ Aluminium ತಟ್ಟೆ ತಂದೆ. 1-11-0 ಬಿತ್ತು. ಮಲಬಾರ್ ಲಾಡ್ಜ್ ನಲ್ಲಿ ದೋಸೆ 0-2-6 ಅಂತೆ. ಇಷ್ಟ ಬರಲಿಲ್ಲ. 0-1-0 ಕೊಟ್ಟು ಜಹಾಂಗೀರ್ ತಿಂದೆ.

13 ಮಾರ್ಚ್ 1946

ಬೆಳಿಗ್ಗೆ ರಾಘೂಗೆ Society ಇಂದ ಸಾಮಾನು ತಂದು ಕೊಟ್ಟೆ. ತಟ್ಟೆ ಬಾಬ್ತು 8 ಆ. ಕೊಟ್ಟ. ಇವತ್ತು Achar ಸಿಕ್ರು. ಮನೇ ನೋಡ್ಕೋತೀನಿ ಅಂದ್ರು.

14 ಮಾರ್ಚ್ 1946

ಮುಖಕ್ಷೌರ ಮಾಡಿಕೊಂಡು ಒಗೆದ ಬಟ್ಟೆ ಹಾಕ್ಕೊಂಡೆ. ಬೆಳಿಗ್ಗೆ ರಾಘ್ವನ್ನ ಹುಡ್ಕೊಂಡು ಹೋದೆ. ಸಿಕ್ಕಲಿಲ್ಲ. ಸಂಜೆ ಬೇಗ ಬಾಂತ ರಾಘೂ ಹೇಳಿದ.

ಇವತ್ತು ಥಕ್ಕರ್ ಬಾಬಾ Statement Translate ಮಾಡಿದೆ. Phone ಪಕ್ಕದಲ್ಲೇ ಕೂತೆ. Narayan ಇವತ್ತೂ ಬಂದಿಲ್ಲ. ಸಂಜೆ ಆದ ತಕ್ಷಣ ಹೊರಟೆ.

City Busನಲ್ಲಿ ಕೂತು ಬಂದೆ. Bus Standನಲ್ಲಿ V.Srinivasa Rao (ಇಂಗ್ಲಿಷ್ ಮೇಷ್ಟ್ರು) ಕಂಡರು. ಮಾತನಾಡಿಸುವ ಧೈರ್ಯ ಆಗಲಿಲ್ಲ. 4 ಕಾರ್ಡು ತೆಗೆದುಕೊಂಡೆ. ಮನೆಗೆ ಬಂದ ಮೇಲೆ ಊಟ ಆಯ್ತು.

6 ಕಾಸು Weighing Machineಗೆ ಹಾಕಿ ಕಳಕೊಂಡೆ. ಹೊಸ ಮನೇಲಿ ಮಲಗಲಿಲ್ಲ.

15 ಮಾರ್ಚ್ 1946

ಬೆಳಿಗ್ಗೆ ಏಳಕ್ಕೇ ಇಷ್ಟವಿಲ್ಲ. Societyಗೆ ಹೋಗಿ ಸಾಮಾನು ತಂದಿದ್ದಾಯ್ತು. ಅಲ್ಲಿಂದ ಊಟ ಮಾಡ್ಕೊಂಡು ಹೋಗಬೇಕಾದ್ರೆ Late ಆಯ್ತು. ಮನೇ ಬಿಟ್ಟಾಗಲೇ 10 3/4 ಗಂ. ಆಫೀಸಿಗೆ ಹೋದಾಗ 11 1/2 ಆಗಿತ್ತು. ಇವತ್ತು ಬಣ್ಣ ಹಾಕುವವರ ಹೆದರಿಕೆ ಬೇರೆ!

ಮಧ್ಯಾಹ್ನ Shamachar ಏನಾದ್ರೂ ನನ್ನ ವಿಚಾರದಲ್ಲಿ ರಾಮಯ್ಯನೋರು ಕರೆದಾಗ ಒಗ್ಗರಣೆ ಹಾಕಿದಾರೇನೋ ತಿಳಿಯೋಣಾಂತ ಪ್ರಯತ್ನ ಪಟ್ಟೆ. ಅಷ್ಟೊತ್ತಿಗೆ ವೆಂಕಟ್ರಾಮ್ & ಶಾಸ್ತ್ರಿ ಜತೇಲಿ ಅವ್ರನ್ನ ಕಾಫೀಗೆ ಎಳ್ಕೊಂಡೋದ್ರು. 1st Disappointment! Pay ಏನಾರೂ ಸಲೀಸಾಗಿ ಬರತ್ತೇನೋಂದ್ರೆ ಅದೂ ಬರೋ ಮಾರ್ಗವೇ ಇಲ್ಲ.

ನನ್ನ Reporter ಆಗಿ ಏಕೆ ಕಳಿಸಬಾರದೆಂದು ಮಾತು ಬಂದಿತ್ತಂತೆ, Prop. ಹತ್ತಿರ! Latest A.P.I. Messages Receive ಮಾಡಿದೆ.

ಕಾದು ಬೇಸರವಾಗಿ ಹೊರಟು ಬಂದೆ. ವಾಸುದೇವರಾವ್ 2 ರೂ. ಸಾಲ ಕೇಳಿದರು. ಅವರಿಗೆ ಈ ವಿಚಾರ ಹೇಳಿದೆ. ಏನು ತಿಳುಕೊಂತಾರೇಂತ, ನಾನೇನು ಮಾಡಲಿ?

Whitefieldನ Mr.Achar ಸಿಕ್ಕು ಕಾಫಿ ಕೊಡಿಸಿದ್ರು. ಸಂಜೆ ರಾಘ್ವ ಸಿಕ್ಕಿದ್ದ. ನಾಳೆ Advance ಏನಾರೂ ಕೇಳಾರೆಂದು 10 ರೂ. ಕೊಟ್ಟಿದೀನಿ ಅಕ್ಕನ ಹತ್ರ.


Translations ಜತೆಗೆ ಇಂಗ್ಲಿಷ್ Proofsಊ ನೋಡ್ಬೇಕು

24 ಫೆಬ್ರವರಿ 1946, ಭಾನುವಾರ

‘ರೌಂಡ್ ಟೇಬರ್’ Articleನ Translate ಮಾಡಿ ರಾಘವನ ಕೈಗೆ ಕೊಟ್ಟೆ.

ಸಂಜೆ ಕುಮಾರಾ ಪಾರ್ಕ್ ಕಡೇ ಇಂದ Race Course ಮಾರ್ಗವಾಗಿ Reading Roomಗೆ ಬಂದೆವು. ಸತ್ಯನಾರಾಯಣ ಸಿಕ್ಕಿದ್ದ. ರಾಘ್ವ ಮತ್ತೆ ಕಾಫಿ ಕೊಡಿಸಿದ.

25 ಫೆಬ್ರವರಿ 1946

ಇವತ್ತು ಮಧ್ಯಾಹ್ನ Office ಹತ್ರ ವಾಸೂ ಬಂದಿದ್ದ. ನಾಳೆ ಊಟಕ್ಕೆ ಬಾಂತ ಕರೆದ.

Prop. `M.V.' ಮೇಲೆ Articleನ Translate ಮಾಡೋಕ್ಕೆ ಕೊಟ್ರು.

26 ಫೆಬ್ರವರಿ 1946

Typeಗೆ ಚಕ್ಕರ್.

27 ಫೆಬ್ರವರಿ 1946

Iyengar ಬಂದಿರ್ಲಿಲ್ಲ. ಬಂಗಾರೂನೂ ಇಲ್ಲ. ಕೆಲವು ಇಂಗ್ಲಿಷ್ Proofs ನೋಡಿಕೊಂಡೆ. ಯಜಮಾನರ ‘Madura Mangamma Choultry' Translate ಮಾಡಿದೆ. `Hindustan Times'ನಲ್ಲಿ Subhas Bose Escape ಆದ Article ಬಂದಿದೆ, ಚೆನ್ನಾಗಿದೆ! Indonesianರ ಮೆಲೆ Torture ಮಾಡಿದ ಲೇಖನಾನ Translate ಮಾಡಿ ಅಂದ್ರು, Editor. ನಾಳೇ ಮಾಡ್ಬೇಕು.

ರಾಘವ Ration Card ಕೊಟ್ಟ.

28 ಫೆಬ್ರವರಿ 1946

ಸುಂದ್ರ ಹುಡುಕ್ಕೊಂಡು ಬಂದಿದ್ನಂತೆ. ಏಕೇಂತ ಹೋದೆ. ಅವನ ‘ಗುರುಕುಲ ಕಥಾವಳಿ’ಗೋಸ್ಕರ ಬಂದಿದ್ನಂತೆ.

ಬೆಳಿಗ್ಗೆ ಕೆಲವು English Proofs ನೋಡಿದೆ. ಕನ್ನಡ Matters ಮಾಡಿದೆ. ಬೋಸ್‍ದು II Articleನ Prop. ಇಷ್ಟದಂತೆ Cut ಮಾಡಿ ಇಟ್ಟೆ. Torture Article Translate ಮಾಡ್ತಾ ಇದ್ದೀನಿ, ಇವತ್ತು. ಕಾಫಿ ಕೂಡಾ ಇಲ್ಲ. ಮಹಾರಾಜರು ಹೊಳೇನರಸೀಪುರದ ಹತ್ತಿರ ಹಳ್ಳಿಯೋರಿಗೆ ಅನ್ನ ತಂದು ಬಡಿಸಿದರಂತೆ. ಪರವಾ ಇಲ್ಲ, Stunts ಚೆನ್ನಾಗಿವೆ.

Typewr. ಇವತ್ತು Capitals ಕಲೀತಾ ಇದ್ದೆ. ಅಷ್ಟರಲ್ಲೇ ಅಲ್ಲಿಗೆ ಸುಂದರ, ರಾಜಣ್ಣ ಬಂದ್ರು. ಕಾಫಿನಾರೂ ಗಿಟ್ಟೀತು ಅಂದ್ಕೊಂಡು ಬಂದೆ, ಏನೂ ಇಲ್ಲ.

ಮಳೆ ಸ್ವಲ್ಪ ಹನಿಯಿಟ್ಟಿತು.

Wednesday, December 15, 2010

ಟೈಪಿಂಗ್ ಕಲೀಬೇಕು, ಸೈಕಲ್ ತುಳೀಬೇಕು

..... ನಿರೀಕ್ಷೆಗಿಂತಲೂ ಕಡಿಮೆ ಸಂಬಳ. ಆದರೆ ಹೊಸ ವೃತ್ತಿಯಲ್ಲಿ ಸಿಗುತ್ತಿದ್ದದ್ದು ಅದಮ್ಯ ತೃಪ್ತಿ. ಕೆಲಸ ಬಿಟ್ಟು ಬಿಡಲೆ, ಎಲ್ಲೋ ಸೊಸೈಟಿಯಲ್ಲಿ ಕಾರಕೂನನಾದವನಿಗೆ 50 ರೂ. ಸಂಬಳ, ನಾನೂ ಅಲ್ಲಿಗೆ ಹೋಗಬಹುದಿತ್ತಲ್ಲವೆ? ಎಂಬ ತಾಕಲಾಟ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿಯಬೇಕು, Cycle ತುಳಿಯಲು ಕಲಿಯಬೇಕು ... ಹೀಗೆ ಆದ್ಯತೆಗಳು ಸಿದ್ಧವಾಗುತ್ತವೆ 18ರ ಹರೆಯದ ಹುಡುಗನಲ್ಲಿ. ರೂಪಾಯಿಗಳಿರಲಿ, ಆಣೆ, ಕಾಸುಗಳಿಗೂ ಲೆಕ್ಕ ಹಾಕಬೇಕಾದ ಪರಿಸ್ಥಿತಿ. .... ಮುಂದೆ ಓದಿ.

20 ಫೆಬ್ರವರಿ 1946

ರಾಘೂ ಊರಿಗೆ ಹೋದ. Stationಗೆ ಹೋಗಿದ್ದೆ. 2 ಆ. ಕೈಲಿಟ್ಟ. ಕೊಂಡು ಕೊಂಡಿದ್ದ Platform Ticketನ ಯಾರಿಗೋ ತ್ಯಾಗ ಹಾಕಿದೆ.

Soldiers Coffee Boardನಲ್ಲಿ ಕಾಫಿ ಕುಡಿದೆ.

Proprietor ಆರ್ಟಿಕಲ್ Translate ಮಾಡೋಕ್ಕೆ ಕೊಟ್ರು.

21 ಫೆಬ್ರವರಿ 1946

ಪುಟ್ಟೂಗೆ ಕಾರ್ಡು ಬರೆದೆ. Societyಗೆ ಹೋಗಿದ್ದೆ, ಅಕ್ಕಿ (ಕೋಟಾ?) ಕಮ್ಮಿ ಮಾಡಿದ್ದಾರೆ.

22 ಫೆಬ್ರವರಿ 1946

Bombay Firing ಉಗ್ರವಾಗಿದೆ.

ಬೆಳಿಗ್ಗೆ ರಾಘ್ವನ್ನು ಹುಡುಕಿಕೊಂಡು ಹೋಗಿದ್ದೆ. ರಾಜಣ್ಣ ಸಿಕ್ಕಿದ್ದ. ಸಂಜೆ Achar (WFD) ಸಿಕ್ಕಿದ್ರು. ಅವರಿಗೆ ಕಾಫಿ ಕೊಡಿಸಿದೆ. ಸಂಜೆ Type ಮುಗಿದ ಮೇಲೆ ವೆಂಕಟೇಶಮೂರ್ತಿ ಕಾಫಿ ಕೊಡಿಸಿದ. ಬೆಳಗ್ಗೆ ಸುಂದರನ ಮನೆಗೆ ಹೋಗಿದ್ದೆ.

23 ಫೆಬ್ರವರಿ 1946

ಬೆಳಿಗ್ಗೆ Societyಗೆ ಹೋಗಿದ್ದೆ. ಅಕ್ಕಿ ಸರಿಯಾಗಿ ಕೊಟ್ರು. ರಾಘವ ಸಿಕ್ಕಿದ್ದ. ಅವನ್ನ ಅಕ್ಕೀ ಕೊಡಿಸೂ ಅಂದೆ. ಮಧ್ಯಾಹ್ನ ಆಫೀಸ್ ಹತ್ರ ಬಂದಿದ್ದ.

Officeಗೆ ಹೊರಡಕ್ಕೆ ಮುಂಚೆ ಗುಂಡಪ್ಪನ ಹೋಟಲಲ್ಲಿ ಹಾಲು, ಕಾರ್ಡು ತೊಗೊಳ್ಳೋಣಾಂತಿದ್ದೆ. ಆಗಲಿಲ್ಲ. ನಾನು ಕಾಫಿ ಕುಡಿದ ಮೇಲೆ ರಾಘವ ಬಂದ. ಸರಿ ಅವನಿಗೆ ಕಾಫಿ ಕುಡಿಸಿದೆ. ಸಂಜೆ ಸೀನ ಸಿಕ್ಕು ಅವನಿಗೆ ಕಾಫಿ. ರಾಜಣ್ಣ Phone ಮಾಡಿದ್ದ. Unionಗೆ ಹೋಗಲಿಲ್ಲ.

‘ರೋಹಿಣಿ’ Review ಮಾಡಿದೆ.

Instituteನಲ್ಲಿ ಪುಸ್ತಕಾ ಬಿಟ್ಟು ಬಿಟ್ಟಿದ್ದೆ. ತಿರುಗ ಓಡಿ ಹೋಗಿ ಪುಸ್ತಕ ತಂದಿದ್ದಾಯ್ತು.

[ಅಡಿ ಟಿಪ್ಪಣಿ:- ಪುಟ್ಟೂ - ಸುಬ್ಬಲಕ್ಷಮ್ಮ, ನಾಗೇಶರಾವ್ ಅವರ ತಾಯಿಯ ತಂಗಿ. ತುಮಕೂರು ಜಿಲ್ಲಿಯಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಶಾಲೆ ಮೇಡಂ]
ಮೊದಲ ಸಂಬಳ ಬಂದಾಗ ಮನಸ್ಸು ಮುದುಡಿತು

ಬೆಂಗಳೂರಿನ ‘ತಾಯಿನಾಡು’ ಕಚೇರಿಯಲ್ಲಿ ಉಪಸಂಪಾದಕನ ಕೆಲಸ ಸಿಗುತ್ತದೆ. ಇವರ Pay expectation ಕನಿಷ್ಟ 40 ರೂ., ಸಂಪಾದಕರು 35 ರೂ. ಕೊಡ್ತೀನಿ ಅಂತಾರೆ. ಕೊನೆಗೆ ಮ್ಯಾನೇಜರ್ ಕೊಟ್ಟಿದೆಷ್ಟು? ಹಿಂದೆ ಮಿಲಿಟರಿ ಡಿಪೋದಲ್ಲಿ ಬರ್ತಿದ್ದ ಸಂಬಳದ ಅರ್ಧದಷ್ಟು!

ಜೇಬಿನಲ್ಲಿ ದುಡ್ಡಿಲ್ಲ. ಮೊದಲ ಸಂಬಳವಿನ್ನೂ ಬಂದಿಲ್ಲ. ಪರಿಚಿತರೆಲ್ಲರಲ್ಲೂ ಸಾಲ ಕೇಳಾಗಿದೆ, ಉತ್ತರ ನಹೀಂ! ಅಕ್ಕನ ಮನೆಯಲ್ಲಿ ವಾಸ. ಕಚೇರಿಯಲ್ಲಿ ಕಾಫಿಗೆ ಕಾಸು ಹೊಂದಿಸಲು ಪರದಾಡಬೇಕಾದ ಕಾಲ. ಹೀಗೊಂದು ದಿನ ಆಫೀಸಿನಲ್ಲಿ ಕೂತಿದ್ದಾಗ unexpected ಆಗಿ ಊರಿನಿಂದ ಅಮ್ಮ ಬರುತ್ತಾರೆ. ಸರಿ, ಹಾಸಿಗೆ ಹೊತ್ತುಕೊಂಡು ಬಂಧು ಅಶ್ವಥ್ಥಣ್ಣನವರ ಮನೆಯಲ್ಲಿ ಇಡುತ್ತಾರೆ. ಸಿಟೀ ಬಸ್ಸಿನಲ್ಲಿ ಅಮ್ಮನನ್ನು ಅಕ್ಕನ ಮನೆಗೆ ಕಳುಹಿಸುತ್ತಾರೆ. ಇತ್ತ ಚಿಕ್ಕಪ್ಪ ಊರಿನಿಂದ ಬಂದಿರುತ್ತಾರೆ. ಊರಿನ ಇವರ ಜಮೀನು ಕೊಳ್ಳುತ್ತೇನೆಂದು ಅವರು ಕೊಟ್ಟ ಭರವಸೆ ಈಡೇರುವುದಿಲ್ಲ. ಬೆಂಗಳೂರಿನಲ್ಲಿ ಮಗ ಮನೆ ಇನ್ನೂ ಮಾಡಿಲ್ಲವೆಂಬ ಅಸಮಧಾನ ಅಮ್ಮನಿಗೆ ..... ಮುಂದೆ ಓದಿ

13 ಫೆಬ್ರವರಿ 1946

ಬೆಳಗ್ಗೆ ಅಮ್ಮನಿಗೂ ನನಗೂ ಮಾತಾಯ್ತು. ಅತ್ತಳು. ನಾನೇನು ಮಾಡಲಿ? ಮನೆ ಸಿಕ್ಕರೆ ಬೇಡಾ ಅಂತೇನ್ಯೇ? ಮಧ್ಯಾಹ್ನ ಅಮ್ಮ ಊರಿಗೆ ಹೋದಳು ..... ಇವತ್ತು ಕಾಫೀನೇ ಇಲ್ಲ.

14 ಫೆಬ್ರವರಿ 1946

ಇವತ್ತೂ ಕಾಫಿ ಇಲ್ಲದೇನೇ ಕತೆ ಹಾಕಿದೆ.

15 ಫೆಬ್ರವರಿ 1946

ರಾಘು ಮಧ್ಯಾಹನ ಆಫೀಸ್ ಹತ್ರ ಬಂದಿದ್ದ. ಕಾಫಿ ಕೊಡಿಸಿದ. 4 ಆ. ಬೇರೆ ಕೊಟ್ಟ. ಆಮೇಲೆ ರಾಘವ ಬಂದ ನನ್ನ Pay expect ಮಾಡಿ. ಎಲ್ಲರಿಗೂ Pay ಬಂತು. ನನಗೆ ಮಾತ್ರಾ ಇಲ್ಲ. ಸರಿ, ಅವನ್ನ ಸಾಗಿ ಹಾಕಿದೆ. ಕಾಫಿ, ವಡೆ ಗಿಟ್ಟಿಸಿದೆ. ಆಮೆಲೆ S.R.ಭೀಮು ಬಂದ. ಅದಾದ ಮೇಲೆ ಸೀನ ಬಂದ. ನನ್ನ ಗೋಳ್ಕರೆ ನೋಡಿ ಹೊರಟು ಹೋದ. ತಮ್ಮಣ ಸಿಕ್ಕ. ಅವನ್ಜತೇಲಿ ಮಾತಾಡ್ಕೊಂಡು, ಕಾಫಿ ಕೊಡಿಸಿ, Type ಮುಗಿಸಿ ಬರೋ ಹೊತ್ತಿಗೆ Late ಆಗಿತ್ತು.

16 ಫೆಬ್ರವರಿ 1946

ನಾಳೆ ನಾಟಕಕ್ಕೆ ಪಾಸ್ ಸಿಕ್ತು. ಸಂಬಳ ಬರ್ಲಿಲ್ಲಾಂತ Shamacharಗೆ ಹೇಳಿದೆ. ಸೋಮವಾರ ಬರದೆ ಹೋದ್ರೆ ಸಾಲ ಕೊಡ್ತೀನೀಂದ್ರು.

17 ಫೆಬ್ರವರಿ 1946

... ಸಂಜೆ ನಾಟಕಕ್ಕೆ ಹೋಗುವಾಗ ವಿಧಿ ಇಲ್ಲದೆ ರಾಘೂನ ದುಡ್ಡು ಕೇಳಿದೆ. 8 ಆ. ಕೊಟ್ಟ. ನಾಟಕ 3 ರೂ. ಸೀಟ್ನಲ್ಲಿ ಕೂತೆ - 5 ರೂ. ಬದ್ಲಾಗಿ. ನಾಟಕ ಚೆನ್ನಾಗಿತ್ತು. ಮನೆಗೆ ಬಂದಾಗ 10 ಗಂಟೆ.

18 ಫೆಬ್ರವರಿ 1946

ಇವತ್ತು Pay ಕೊಟ್ರು @ 30-0-0. ಮನಸ್ಸು ಚಿಕ್ಕದಾಯ್ತು. 27-1-6 ಬಂತು. Shamacharನ ಕೇಳಿದೆ. ಹೇಳ್ತೀನೀಂದ್ರು.

ಕಿಟ್ಟನಿಗೆ ಕಾರ್ಡು ಬರೆದೆ. ಅವನು ಪೈಗಂಬರ್ ಜಯಂತಿ Invitation ಕಳಿಸಿದಾನೆ. [ರಾಘವೇಂದ್ರ ಮೂರ್ತಿ, ಸೋಮ, ವೆಂಕಟೇಶ್ ಸಿಕ್ಕಿದ್ರು. ಮುನಿರಾಜು ಸಿಕ್ಕು ಮಾತಾಡಿಸಿದ].
ನಾಟಕದ report ಬರೆದುಕೊಟ್ಟೆ.

Tuesday, December 14, 2010

ಕಾಫೀಬೋರ್ಡ್‍ನಲ್ಲಿ ಕೆಲ್ಸ ಸಿಗೋಲ್ಲ ಅನ್ನೋದು ಖಾತ್ರಿಯಾಯ್ತು

21ನೇ ಜನವರಿ 1946

Shamachar Officeಗೆ ಬಂದ್ರು ಇವತ್ತು. ಅಷ್ಟು Liberties ಇಲ್ಲ ಅವರಿಗೆ.

[ಅಡಿ ಟಿಪ್ಪಣಿ:- ಶಾಮಾಚಾರ್ ‘ತಾಯಿನಾಡು’ ಸೇರಿದರು.]

28ನೇ ಜನವರಿ 1946

Prop. ಬಂದಿದಾರೆ. New Types ಬಂದಿವೆ.

30ನೇ ಜನವರಿ 1946

ರಾಘ್ವ ಬೆಳಿಗ್ಗೆ ಸಿಗ್ಲಿಲ್ಲ. ಸಂಜೆ Union, ರಾಘ್ವನ ಹುಡ್ಕುಕ್ಕೊಂಡುಹೋದೆ. ನಿನ್ನೆ ಕೆಲವು Applicationsನ ಅವ್ರ ಸೆಕ್ರೆಟರೀನೇ choose ಮಾಡಿಕೊಂಡನಂತೆ. ನಂದಿಲ್ಲ.

31ನೇ ಜನವರಿ 1946

ಅನಂತಸುಬ್ಬರಾಯರಿಗೆ ನಾಳೆಯಿಂದ ರಜಾ.

ಕೊಚಿನ್ ಮಹಾರಾಜ ಸತ್ತು ಹೋದ.

04ನೇ ಫೆಬ್ರವರಿ 1946

‘ವಾಹಿನಿ’ ಹೊಸ Getupನಲ್ಲಿ ಬಂದಿದೆ. ಇನ್ನೂ ಸಂಬಳ ಬರಲಿಲ್ಲ. ಅರಳೇಪೇಟೆಗೆ ಹೋಗಿದ್ದೆ.

06ನೇ ಫೆಬ್ರವರಿ 1946

ಸಂಜೆ ಅನಂತಸುಬ್ರಾವ್ ಸಿಕ್ಕಿದ್ದರು.

Viceroy Sira Tour.

08ನೇ ಫೆಬ್ರವರಿ 1946

ಬಹಳ ಕೆಲಸ. ಶ್ರೀನ್ವಾಸನ್ (Ed.) ಕೇಳಿದ್ರು Cycle ಬರತ್ಯೇಂತ. ಇಲ್ಲಾಂದೆ. Shame!

Ghouse Mohiyuddeenದು Lecture ಬಂದಿದೆ. Viceroy Tour Phone Call Rec. ಮಾಡಿ ಕಂಪೋಸಿಂಗ್ ಕೊಟ್ಟೆ. API Phone.

ಸಂಜೆ ಸೀನಾ ಬಂದಿದ್ದ. ಬೇಂದ್ರೆ ಕಾಣಿಕೆಗೆ 4 ಆ. ಕಿತ್ತ.

[ಅಡಿ ಟಿಪ್ಪಣಿ:- ಗೌಸ್ ಮೊಹಿಯುದ್ದೀನ್ ಬಹುಶಃ ಪತ್ರಕರ್ತರು ಅನ್ಸತ್ತೆ. ಸಿರಾದಲ್ಲಿನ ಬರಗಾಲ ಪೀಡಿತರನ್ನು ಕಾಣಲು ವೈಸ್‍ರಾಯ್ ಭೇಟಿಯಿತ್ತಿರಬಹುದು.
ಆಗ ದೇಶೀಯ ವಾರ್ತೆಗಳು A.P.I. ನಿಂದ, ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು. ಬೆಂಗಳೂರಿನಲ್ಲಿ A.P.I. ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು, (ಮುಂದೆ ಅದೇ P.T.I. ಆಯಿತು) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ. ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು, ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ, ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು, ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು. ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು (FLASH NEWS) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು. ಅಂದರೆ ಫೋನ್ ಬಳಿ ಚುರುಕಾಗಿ, ಶೀಘ್ರವಾಗಿ, ತಪ್ಪಿಲ್ಲದೆ, ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು. ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ, ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು. ]

09ನೇ ಫೆಬ್ರವರಿ 1946

Conferenceಗಾಗಿ ರಜಾ. ಮನೇಲಿ ಹೇಳ್ಲಿಲ್ಲ. ಊಟ ಮಾಡ್ಕೊಂಡು ಸಿಟೀ ಕಡೆ ಹೊರಟೆ, ರಾಜಣ್ಣನ ಕರ್ಕೊಂಡು. ನಾಳೆ Cycle ಕಲೀಸ್ತೀನೀಂದ.

[ಬಹುಶಃ ಪತ್ರಕರ್ತರ ಅಸೋಸಿಯೇಶನ್ ಕಾನ್ಪರೆನ್ಸ್ ಇರಬಹುದು.
ರಾಜಣ್ಣ ಬಹುಶಃ ದಾಯಾದಿ ಸಹೋದರನಿರಬೇಕು.]

10ನೇ ಫೆಬ್ರವರಿ 1946

ಬೆಳಿಗ್ಗೇ Cycling ಹೋದೆ. 2 ರೌಂಡಿಗಾಗ್ಲೇ ತಲೇ ತಿರುಗೋ ಹಾಗಾಯ್ತು. B.S.Ramachar ಜತೇಲಿ ಸಂಜೆ ಹೋದೆ. ಅ.ನಾರಾಯಣಸ್ವಾಮಿ ಅಯ್ಯರ್ ಸಿಕ್ರು. ಶಂಕರಯ್ಯ ಹಾಲ್ ಸಂಗೀತಕ್ಕೆ ಎಳಕೊಂಡು ಹೋದರು.

[ಪ್ರಸಿದ್ಧ ಗಮಕಿ, ಕವಿ ಬಿ.ಎಸ್.ರಾಮಾಚಾರ್ 11-12-2010 ಬೆಂಗಳೂರಿನಲ್ಲ್ಲಿ ನಿಧನರಾದರು. ಆಗ ಅವರು ‘ಪ್ರಜಾಮತ’ ಪತ್ರಿಕೆಯ ಉಪಸಂಪಾದಕರಾಗಿದ್ದರು. ನಾಗೇಶರಾವ್ ಅವರಿಗೆ ತುಮಕೂರಿನಲ್ಲಿಯೇ ಮಿತ್ರರಾದವರು.]

11ನೇ ಫೆಬ್ರವರಿ 1946

ಅನಂತಸುಬ್ಬರಾವ್ ಬಂದಿದಾರೆ. ಹಾಸನಕ್ಕೆ ಹೋಗಿದ್ದ Journalists ನಿಧಾನವಾಗಿ ಬಂದರು.

[ಬಹುಶಃ Conference ಹಾಸನದಲ್ಲಿ ಇದ್ದಿರಬಹುದು].


ಕಾಫಿಗೂ ಕಾಸಿಲ್ಲದ ದಿನಗಳು

05 ಜನವರಿ 1946

11ಕ್ಕೆ ಆಫೀಸಿಗೆ ಹೋದೆ. ಇವತ್ತು Ramiah ಕಲ್ಕತ್ತಾಗೆ ಹೋಗ್ತಾರಂತೆ. ಸೀನನಿಗೆ Pay Settle ಆಗಲಿಲ್ವಂತೆ. ರಾಘವ ಸಿಗಲಿಲ್ಲ. ಸಂಜೆ Paper Copy ತಂದೆ. ಶಾಮಾಚಾರ್‌ನ ನೋಡಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ.

[ಅಡಿ ಟಿಪ್ಪಣಿ:- ಸೀನ ಮತ್ತು ರಾಘವ ನಾಗೇಶರಾವ್ ಅವರ ಬೆಂಗಳೂರು ಸ್ನೇಹಿತರು.
‘ತಾಯಿನಾಡು’ ಆಗ ಸಂಜೆ ದಿನಪತ್ರಿಕೆ.
ಅಶ್ವಥ್ಥಣ್ಣ ನಾಗೇಶರಾವ್ ಅವರ ದಾಯಾದಿ ನೆಂಟರು, ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಾಂಟ್ರ್ಯಾಕ್ಟ್ ಮಾಡುತ್ತಿದ್ದವರು].

06 ಜನವರಿ 1946

ಭಾನುವಾರ. ಬೆಳಿಗ್ಗೆ ಎದ್ದು ಪಿಳ್ಳೇ ಮನೆಗೆ ಹೋದೆ. ಹೇಳಲೋ ಬೇಡವೋ ಎಂದಿದ್ದು ಕೊನೆಗೆ ಮನಸ್ಸು ಗಟ್ಟಿ ಮಾಡಿ 50 ರೂ. ಸಾಲ ಕೇಳಿದೆ. ಅವರಿಗೆಷ್ಟೋ ತಾಪತ್ರಯ! ಈ ಮಧ್ಯೆ Shopkeeper ಬೇರೆ ಅವರ ಜತೇಲಿ ಸರಿಯಾಗಿಲ್ಲವಂತೆ! ಸರಿ ಪೇಚಾಡಿಕೊಂಡು ಮನೆಗೆ ಬಂದೆ. ಕರುವಿಗೆ ಏನೋ ಆಗಿದೆ. ಸಂಜೆ ಆಸ್ಪತ್ರೆಗೆ ಹೋಗಿ ಜಂತುಹುಳದ ಔಷಧಿ ತಂದುಕೊಟ್ಟೆ. ಸಂಜೆ ಕಾಫೀಪುಡಿ ತರಲು ಹೋದಾಗ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಸೀತಮ್ಮನವರ ಮನೆ ಸಂಪತ್ತು ಇಬ್ಬರೂ ಸಿಕ್ಕಿದ್ದರು. ಗುಂಡ ಬಂದಿದಾನಂತೆ. ಸುಂದರನಿಗೆ ಕಜ್ಜಿಯಂತೆ. Resolution Copies ಕೊಟ್ಟ. ರಾತ್ರೆ ರಂಗಣ್ಣ ಬಂದ.

[ಅಡಿ ಟಿಪ್ಪಣಿ:- ’ತಾಯಿನಾಡು’ ಪತ್ರಿಕೆಗೆ ಆಗ ಭಾನುವಾರ ರಜೆಯಿತ್ತು.
ಪಿಳ್ಳೆ - ಮಿಲಿಟರಿ ಡಿಪೋದಲ್ಲಿ ನಾಗೇಶರಾವ್ ಸಹೋದ್ಯೋಗಿ.
ಶೇಷಾದ್ರಿಪುರದಲ್ಲಿ ಅಕ್ಕನ ಮನೆಯಲ್ಲಿ ನಾಗೇಶರಾವ್ ವಾಸವಿದ್ದರು. ಅಲ್ಲಿ ಕರು ಸಾಕಿದ್ದರು.
ಸಂಘ- ತುಮಕೂರಿನಲ್ಲಿ ನಾಗೇಶರಾವ್ ಸಕ್ರಿಯವಾಗಿ ಭಾಗವಹಿಸ್ತುತ್ತಿದ್ದ ಸನ್ಮಿತ್ರ ಸಂಘ.
ಸಂಪತ್ತು, ಗುಂಡ, ಸುಂದರ - ತುಮಕೂರಿನಲ್ಲಿ ನಾಗೇಶರಾವ್ ಕಾಲೇಜ್ ಮೇಟ್ಸ್.
ರಂಗಣ್ಣ - ನಾಗೇಶರಾವ್ ಅವರ ತಂದೆ, ಹಾಲ್ದೊಡ್ಡೇರಿಯಲ್ಲಿ ಕೃಷಿಕ.]

07 ಜನವರಿ 1946

ರಾಘು ಕಾಗದ ಬರೆದು ಕಳಿಸಿದ್ದಾನೆ, ರಂಗಣ್ಣನ ಕೈಲಿ. 2 ರೂ. ಕಳಿಸಿ ರಂಗಣ್ಣನಿಗೆ shirt ಹೊಲಿಸಿಕೊಡು ಎಂದು ಬರೆದಿದ್ದಾನೆ. ನಾಳೆ ಹೋಗು ಎಂದೆ ರಂಗಣ್ಣನಿಗೆ. ಜಮೀನು ವಿಚಾರ ಬೋಧನೆ ಮಾಡಿದ್ದಾಯ್ತು. ಇಷ್ಟರ ಮೇಲೆ ದೇವರಿದ್ದಾನೆ!

11ಕ್ಕೆ ಆಫೀಸು. Sreenivasan Elect ಆಗಿದ್ದಾರೆ President ಆಗಿ.
‘ಶ್ರೀ’ಯವರು ನಿಧನರಾದರಂತೆ ಮೊನ್ನೆ. ದೊಡ್ಡ ಆಘಾತವಾದಂತಾಯಿತು ಕನ್ನಡನಾಡಿಗೆ.
6 ಗಂತೆ ಆಯಿತು office ಬಿಡುವಾಗ.

ರಾಘವನ್ನ ಹುಡುಕಿಕೊಂಡು Coffee Boardಗೆ ಹೋದೆ. ಸಂಘದವರು Resolution Copies ಕಳಿಸಿದ್ದಾರೆ. ನಾನು ‘ತಾಯಿನಾಡು’ವಿನಲ್ಲಿರುವುದು ಅವನಿಗೆ ತಿಳಿಸಿದೆ. 50 ರೂ. ಸಾಲದ ಪ್ರಸ್ತಾಪ ಎತ್ತಿದೆ.

ಕರು ಹಾಗೇ ಇದೆ. ರಂಗಣ್ಣನಿಗೆ ಕಾರ್ಡು ಕೊಟ್ಟೆ. Typewriting ಚಕ್ಕರ್!

[ಅಡಿ ಟಿಪ್ಪಣಿ:- ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್‍ಗೆ ಶ್ರೀನಿವಾಸನ್ ಅಧ್ಯಕ್ಷರಾಗುತ್ತಾರೆ.
‘ಶ್ರೀ’ - ಬಿ.ಎಂ.ಶ್ರೀಕಂಠಯ್ಯನವರು]
ಮೊದಲ ದಿನ ಮೌನ .....

04 ಜನವರಿ 1946

ತಂಗಳು ತುತ್ತು ತಿಂದು ‘ತಾಯಿನಾಡು’ officeಗೆ ಹೋದೆ. 8 1/2 ಆದರೂ ಶ್ರೀನಿವಾಸನ್ ಬಂದಿರಲಿಲ್ಲ. ಪಾರ್ಥಸಾರಥಿ ಕೈಲಿ ಕಾಗದ ಕೊಟ್ಟೆ. ಕಾದೆ. 9 ಗಂಟೆಗೆ ಶ್ರೀನಿವಾಸನ್ ಬಂದರು. ಸ್ವಲ್ಪ ಹೊತ್ತು ಮಾತಾಡಿದರು. ‘ತಾಯಿನಾಡು’ವನ್ನು ಹೊಗಳಿಕೊಂಡರು. ‘ಜನವಾಣಿ’ಯನ್ನು ಟೀಕಿಸಿದರು. 35 Rs. starting ಅಂದರು. ನಾನು ‘ಶಾಮಾಚಾರ್’ ಹೇಳಿದಾರೆ, 40 ಅಂದೆ. ‘ಆಗಲಿ, Proprietor ಬರ್ತಾರೆ. 11ಕ್ಕೆ ಬನ್ನಿ’ ಅಂದರು. Unionಗೆ ಹೋದೆ. ‘I.N.A. Heroes Set Free' ಅನ್ನೋ Headline ಓದಿ ಸಂತೋಷ ಪಟ್ಟೆ. 12ರ ಹೊತ್ತಿಗೆ ರಾಮಯ್ಯನವರು ಬಂದರು. ನನ್ನ ವಿಚಾರವೆಲ್ಲಾ ವಿಚಾರಿಸಿ 1 Month ಆದ ಮೇಲೆ Pay Fix ಮಾಡ್ತೀನೀಂದ್ರು. ಬೇಕಾದರೆ July ಆದ ಮೇಲೆ Studies Continue ಮಾಡಿದರೂ ಮಾಡಿ ಅಂದರು. ಈ 1 Month Pay ಕೂಡ ಕೊಡ್ತೀನೀಂತ ನನ್ನ ಮನಸ್ಸಿನ ಸಂದೇಹನ ತಾವೇ ನಿವಾರಣೆ ಮಾಡಿದರು. ಅನಂತಸುಬ್ಬರಾಯರು ಎಂಬುವವರನ್ನು ಕರೆದು ಅವರ Assistant ಆಗಿ ಮಾಡಿದರು. ಅವರೂ ಒಳ್ಳೆಯವರೇ. 12 ಗಂಟೆ ಆದ ಮೇಲೆ ಊಟಕ್ಕೆ ಹೋಗಿ ಬನ್ನಿ ಅಂದರು. 3ರ ಹೊತ್ತಿಗೆ ವಾಪಸು ಹೋದೆ. ಅಂತೂ ‘ತಾಯಿನಾಡು’ ನನಗೆ ಒಗ್ಗಿತು. ಎಲ್ಲರೂ ಸರಳರು. ಅವರನ್ನು ಮನಸ್ಸಿನಲ್ಲೇ ವಂದಿಸಿದೆ. ನಾಳಿನಿಂದ 11ಕ್ಕೆ ಹೋಗ್ತೀನಿ. ರಾಘೂಗೆ ಕಾಗದ ಹಾಕಿದೆ. ಕಾಫೀಗೆ ಕೂಡಾ ಒಂದು ಕಾಸಿಲ್ಲ

[ಅಡಿ ಟಿಪ್ಪಣಿ:- ಶ್ರೀನಿವಾಸನ್ - ಪಿ.ಬಿ.ಶ್ರೀನಿವಾಸನ್, ‘ತಾಯಿನಾಡು’ ಸಂಪಾದಕರು;
ಶಾಮಾಚಾರ್ - ಎ.ಟಿ.ಶಾಮಾಚಾರ್, ತುಮಕೂರಿನಲ್ಲಿ ಹೆಚ್.ಆರ್.ನಾಗೇಶರಾವ್ ಅವರಿಗೆ ಮೇಷ್ಟ್ರರಾಗಿದ್ದವರು, ನಂತರ ‘ತಾಯಿನಾಡು’ ಪತ್ರಿಕೆಯಲ್ಲಿ ಸಹೋದ್ಯೋಗಿಯಾದವರು;
ರಾಮಯ್ಯ - ಪಿ.ಆರ್.ರಾಮಯ್ಯ, ‘ತಾಯಿನಾಡು’ ಮಾಲಿಕರು ಹಾಗೂ Daily News ದಿನಪತ್ರಿಕೆಯ ಸಂಪಾದಕರು;
ಅನಂತಸುಬ್ಬರಾವ್ - ಕೆ.ಅನಂತಸುಬ್ಬರಾವ್, ‘ತಾಯಿನಾಡು’ ಪತ್ರಿಕೆಯ ಹಿರಿಯ ಉಪಸಂಪಾದಕರು;
ರಾಘೂ - ಹೆಚ್.ಆರ್.ರಾಘವೇಂದ್ರರಾವ್, ಹೆಚ್.ಆರ್.ನಾಗೇಶರಾವ್ ಅವರ ಅಣ್ಣ, ಮೈಸೂರು ಟೊಬ್ಯಾಕೊ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದವರು.
Union - ಕ್ಯಾಂಟೀನ್ ರೀತಿಯಿದ್ದ ಸಣ್ಣ ರೆಸ್ಟೊರೆಂಟ್, ಅಲ್ಲಿ ಓದಲು ಪತ್ರಿಕೆಗಳು ಸಿಗುತ್ತಿದ್ದವು, ರೇಡಿಯೋ ಇತ್ತು.]
ಪತ್ರಕರ್ತನ ದಿನಚರಿ

[1945 ರಲ್ಲಿ ಡಿಗ್ರಿ ಕಾಲೇಜು ಅಡ್ಮಿಶನ್‍ಗೆಂದು ತುಮಕೂರಿನಿಂದ ಬೆಂಗಳೂರಿಗೆ ಬಂದ 18 ವರ್ಷದ ಹೆಚ್.ಆರ್.ನಾಗೇಶರಾವ್ ಅವರಿಗೆ ಸೆಂಟ್ರಲ್ ಕಾಲೇಜಿನಲ್ಲಿ ಟೈಮಾಗೋಯ್ತು, ಮುಂದಿನ ವರ್ಷ ಬಾ ಎಂಬ ಉತ್ತರ ಬರುತ್ತದೆ. ಬೆಂಗಳೂರಿನಲ್ಲಿಯೇ ಉಳಿದು ಕೆಲಸಕ್ಕಾದರೂ ಪ್ರಯತ್ನಿಸೋಣವೆಂದರೆ ಎಲ್ಲೆಲ್ಲೂ ನಿರಾಸೆ. ಹಿಂದೆ 1944ರ ಕಾಲೇಜು ರಜೆಯಲ್ಲಿ ಬಂದು ವೈಟ್‍ಫೀಲ್ಡ್‍ನಲ್ಲಿದ್ದ ಮಿಲಿಟರಿ ಡಿಪೋನಲ್ಲಿ ಸ್ಟೋರ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಅನುಭವದ ಆಧಾರದ ಮೇಲೆ ಅಲ್ಲಿಗೇ ಮತ್ತೆ ಸೇರುತ್ತಾರೆ. ಉಳಿದಂತೆ ಕೆಲಸಕ್ಕೆ ಅಲೆದಾಟ. ತಾಯಿನಾಡು ಪತ್ರಿಕೆಯ ಉಪಸಂಪಾದಕನಾಗಿ ಸೇರುವ ಹಿಂದಿನ ದಿನದ ಡೈರಿ ನಮೂದು ನಿಮ್ಮ ಅವಗಾಹನೆಗೆ]
ಜನವರಿ, 3, 1946

ಇವತ್ತು ಹೊತ್ತಿಗೆ ಮುಂಚೆ ಹೋಗಬೇಕೆಂದು ಮಾಡಿಕೊಂಡರೆ ಎಂದಿಗಿಂತ Lateಏ. Coffee Boardಗೆ ಹೋಗಿ Office Supdt. ಕೈಲಿ Application ಕೊಟ್ಟೆ. `For the time being No Vacancy. As soon as there is we shall inform you' ಅಂದ. ಸರಿ, ಅಲ್ಲಿಂದ Provident Co.,ಗೆ. ಅಲ್ಲೂನೂ ನಹೀಂ! ಅಲ್ಲಿಂದ Insurance Co.,ಗೆ ಹೋದೆ. Asst. Managerನ ನೋಡಿದ್ದಾಯ್ತು. ಅವನು Office Supdt. ಹತ್ರ ಕಳ್ಸಿದ, ಅವನು Appln. ತೊಗೊಂಡು ‘ತಿಳಿಸ್ತೀವಿ ಹೋಗೀ’ಂದ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡ, ಅಂದ್‍ಹಾಗಾಯ್ತು!’

ಆಕಾಶ ತಲೇ ಮೆಲೆ ಬಿದ್ದ ಹಾಗಾಯ್ತು! ನಿರಾಸೆಯಾಗಿ Shamachar ಮನೇ ಕಡೆ ಹೊರಟೆ. ದಾರಿಯುದ್ದಕ್ಕೂ ಅಪಶಕುನಗಳೇ! ಏನೋ ಹೋದೆ. ಸಿಕ್ಕಿದರು: `you saved me from a lot of trouble' ಅಂದ್ರು, ಧೈರ್ಯ ಆಯ್ತು. ಆಮೇಲೆ P.B.Srinivasanಗೆ ಒಂದು ಪತ್ರ ಬರಕೊಟ್ಟು, ನಾಳೆಯೇ ಹೋಗಿ ಅಂದ್ರು. ಹಾಗೇ ಆಗಲಿ ಅಂದೆ. ಇವತ್ತಿಗೆ ಶಕುನಗಳನ್ನು ಮರೆತೆ. ಮುಂದೂ ನಂಬಲಾರೆ!

[ಅಡಿ ಟಿಪ್ಪಣಿ:- Shamachar - ಎ.ಟಿ.ಶಾಮಾಚಾರ್, ನಾಗೇಶರಾವ್ ಅವರಿಗೆ ತುಮಕೂರಿನಲ್ಲಿ ಮೇಷ್ಟ್ರಾಗಿದ್ದವರು.
P.B.Srinivasan - ತಾಯಿನಾಡು ಪತ್ರಿಕೆಯ ಸಂಪಾದಕರು]

Saturday, August 28, 2010

‘ಸಂಯುಕ್ತ ಕರ್ನಾಟಕ’ದ ಕತೆ

`ಕರ್ಮವೀರ' ಪತ್ರಿಕೆ ನಡೆಸುತ್ತಿದ್ದ ರಂಗನಾಥ ದಿವಾಕರ ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. ದತ್ತೋಪಂತ ಬೆಳವಿ, ನಾರಾಯಣರಾವ್ ಜೋಷಿ, ದಾತಾರ ಬಳವಂತರಾವ್, ಗೋಖಲೆ ಕೇಶವರಾವ್ ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ ಬಾಗಲಕೋಟೆಯ `ಕನ್ನಡಿಗ', ಬೆಳಗಾವಿಯ `ಅರುಣೋದಯ' ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ `ಸಂಯುಕ್ತ ಕರ್ನಾಟಕ' ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು.

ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ ಹುಬ್ಬಳ್ಳಿಯಿಂದ ವಿ.ಬಿ.ಪುರಾಣಿಕರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ `ಲೋಕಮತ'. ನಾರಾಯಣರಾವ್ ಕಲ್ಲೆ, ಮಾಜಿ ಮಂತ್ರಿ ಕಲ್ಲನಗೌಡ ಪಾಟೀಲ ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಇದನ್ನು ಕಂಡು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ `ಸಂಯುಕ್ತ ಕರ್ನಾಟಕ'ವು ಹುಬ್ಬಳ್ಳಿಗೆ ಬಂತು.

ರಂಗನಾಥ ದಿವಾಕರ ಧರ್ಮದರ್ಶಿತ್ವದಲ್ಲಿ, ಮೊಹರೆ ಹಣಮಂತರಾಯರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು "ಲೋಕ ಶಿಕ್ಷಣ ಟ್ರಸ್ಟ್" ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಬಾಗಲಕೋಟೆಯ ಪುರೋಹಿತ ಬಂಧುಗಳು ರಂಗನಾಥ ದಿವಾಕರರಿಗೆ ಬೆಂಬಲವಾಗಿ ನಿಂತರು. ಹಿರಿಯರಾದ ತಮ್ಮಣ್ಣಾಚಾರ್ಯ ಪುರೋಹಿತರು ಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ ಹ.ರಾ.ಪುರೋಹಿತರು ಸಂಪಾದಕೀಯ ಮಂಡಲಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಾರಾಯಣರಾವ್ ಕಲ್ಲೆ ಅವರು ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು.

`ಸಂಯುಕ್ತ ಕರ್ನಾಟಕ' ಪತ್ರಿಕೆಯ ಧ್ಯೇಯೋದ್ದೇಶಗಳು - ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. 1956ರ ಹೊತ್ತಿಗೆ ಇವೆರಡೂ ಉದ್ದಿಶ್ಯಗಳು ಸಂಪೂರ್ಣವಾಗಿ ಈಡೇರಿದ್ದವು. ರಂಗನಾಥ ದಿವಾಕರ ಬಿಹಾರದ ರಾಜ್ಯಪಾಲರಾಗಿದ್ದರು. ಈ ಸಮಯದಲ್ಲಿ ಅವರಿಗೊಂದು ಕನಸು ಹುಟ್ಟಿತು. ಕೇವಲ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪತ್ರಿಕೆ ಇಡೀ ಮೈಸೂರು ರಾಜ್ಯವನ್ನು ತಲುಪುತ್ತಿಲ್ಲ. ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕೆಂದರೆ ರಾಜಧಾನಿಯಾದ ಬೆಂಗಳೂರಿನಿಂದಲೂ ಒಂದು ಆವೃತ್ತಿಯನ್ನು ತರಬೇಕು.

ಈ ಕೆಲಸಕ್ಕೆ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದ ಎಂ.ಎಚ್.ಕೌಜಲಗಿ ಅವರನ್ನು ದಿವಾಕರ ಅವರು ನಿಯೋಜಿಸಿದರು. ದ್ವಿತೀಯ ಮಹಾಯುದ್ಧ ಸಮಯದಲ್ಲಿ ‘ಸಂಜಯ’ ಎನ್ನುವ ಸ್ವಂತ ವಾರಪತ್ರಿಕೆಯನ್ನು ಪ್ರಕಟಿಸಲೆಂದು ‘ಸಂಕ’ದ ಹುಬ್ಬಳ್ಳಿ ಕಚೇರಿಯನ್ನು ತೊರೆದಿದ್ದ ಕೆ.ಶಾಮರಾವ್ ಅವರನ್ನು ಬೆಂಗಳೂರು ಮುದ್ರಣದ ಕೆಲಸಕ್ಕೆಂದು ಮತ್ತೆ ಕರೆಯಲಾಯಿತು. ಎರಡು ಕೇಂದ್ರಗಳಲ್ಲಿ ಒಂದೇ ಪತ್ರಿಕೆಯ ಆವೃತ್ತಿಗಳನ್ನು ಹೊರತರುವ ಪ್ರಯೋಗ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತಾಗಿತ್ತು.

ಸ್ವಂತ ಕಚೇರಿಯೊಂದು ಬೆಂಗಳೂರಿನಲ್ಲಿರದ ಕಾರಣ, ಶಾಮರಾವ್ ಅವರ ಮನೆಯಲ್ಲಿಯೇ ಟೆಲಿಪ್ರಿಂಟರ್ ಯಂತ್ರವನ್ನು ಜೋಡಿಸಲಾಯಿತು. ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಪದಗಳನ್ನು ಟೈಪ್ ಮಾಡಿ ಹುಬ್ಬಳ್ಳಿಗೆ ವರದಿಗಳನ್ನು ಕಳುಹಿಸುವ ಕೆಲಸ ಆರಂಭವಾಯಿತು. ಬಹು-ಮುದ್ರಣ ಆವೃತ್ತಿಗಳಿದ್ದ ‘ಹಿಂದೂ’ ಮತ್ತು ‘ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಗಳ ಮದ್ರಾಸ್ ಕಚೇರಿಗಳಲ್ಲಿ ಕೌಜಲಗಿ ಹಾಗೂ ಶಾಮರಾವ್ ಟೆಲಿಪ್ರಿಂಟರ್ ವ್ಯವಸ್ಥೆಯ ಬಳಕೆಯ ಬಗ್ಗೆ ತರಬೇತಿ ಪಡೆದರು.

‘ಸಂಕ’ದ ಬೆಂಗಳೂರು ಆವೃತ್ತಿಯ ಬುನಾದಿ ಹಾಕುವ ಸಮಯದಲ್ಲಿಯೇ ‘ತಾಯಿನಾಡು’ ಪತ್ರಿಕೆಯ ಮಾಲಿಕತ್ವ ಸ್ವಾತಂತ್ರ್ಯ ಹೋರಾಟಗಾರ ಪಿ.ಆರ್.ರಾಮಯ್ಯನವರಿಂದ ಎಂಜಿನಿಯರಿಂಗ್ ಕಂಟ್ರ್ಯಾಕ್ಟರ್ ಎಂ.ಎಸ್.ರಾಮಯ್ಯನವರಿಗೆ ಹಸ್ತಾತಂತರವಾಯಿತು (1958). ಪತ್ರಿಕೋದ್ಯೋಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಪಿ.ಆರ್.ರಾಮಯ್ಯನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದವರು ‘ಸಂಕ’ದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವರೆಂಬ ನಂಬಿಕೆ ಸಂಪಾದಕ ಮೊಹರೆ ಹಣಮಂತರಾಯ ಅವರದಾಗಿತ್ತು. ‘ತಾಯಿನಾಡು’ ಪತ್ರಿಕೆಯ ಅನುಭವಿ ಪತ್ರಕರ್ತರನ್ನು ‘ಸಂಕ’ದ ಬೆಂಗಳೂರು ಆವೃತ್ತಿಗೆ ನೇಮಕ ಮಾಡಿಕೊಳ್ಳುವ ನಿರ್ಧಾರವಾಯಿತು. ಜತೆಗೆ ಸಂಪೂರ್ಣ ಹುಬ್ಬಳ್ಳಿಯದಾಗಿದ್ದ ‘ಸಂಕ”ವನ್ನು ಹಳೆಯ ಮೈಸೂರು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ‘ತಾಯಿನಾಡು’ ಪತ್ರಕರ್ತರು ಸೂಕ್ತ ಎಂಬ ಚಿಂತನೆಯೂ ಇತ್ತು. ಕಾದಂಬರಿಕಾರ, ‘ಗ್ರಾಮಾಯಣ’ ಖ್ಯಾತಿಯ ‘ರಾವಬಹಾದ್ದೂರ’ (ಆರ್.ಬಿ.ಕುಲಕರ್ಣಿ) ಅವರನ್ನು ಬೆಂಗಳೂರು ಆವೃತ್ತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.

‘ತಾಯಿನಾಡು’ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಸಂಪಾದಕೀಯ ಬರಹಗಾರ ಹಾಗೂ ಸಂಪಾದಕರ ನಂತರದ ಸ್ಥಾನದಲ್ಲಿದ್ದ ಹೆಚ್.ಆರ್.ನಾಗೇಶರಾವ್ 1958ರ ಆಗಸ್ಟ್ ತಿಂಗಳಿನಲ್ಲಿ ‘ಸಂಕ’ವನ್ನು ಸೇರಿದರು. ನಂತರ ‘ತಾಯಿನಾಡು’ ಪತ್ರಿಕೆಯ ಹಿರಿಯ ಹುದ್ದೆಗಳಲ್ಲಿದ್ದ ಕೆ.ಅನಂತಸುಬ್ಬರಾವ್ ಹಾಗೂ ಎಸ್.ವ್ಯಾಸರಾವ್ ‘ಸಂಕ’ ಸೇರಿದರು. ಇವರೆಲ್ಲರಿಗೂ ಮುಂಚೆ ‘ತಾಯಿನಾಡು’ವಿನಲ್ಲಿ ವ್ಯವಸ್ಥಾಪಕರಾಗಿದ್ದ ಕೆ.ಆರ್.ವೆಂಕಟಾಚಲಪತಿಯವರು ಎಂ.ಎಚ್.ಕೌಜಲಗಿಯವರ ಜತೆಗೂಡಿದ್ದರು. ‘ವಿಶ್ವ ಕರ್ನಾಟಕ’ದಿಂದ ಕವಿ ಅರ್ಚಕ ವೆಂಕಟೇಶ, ಕತೆಗಾರ ‘ಭಾರತೀಪ್ರಿಯ’ (ಎಸ್.ವೆಂಕಟರಾವ್), ಶ್ರೀನಿವಾಸ ತುಪ್ಪ ಸಂಪಾದಕ ಮಂಡಲಿ ಸೇರಿದರು.

ನಂತರ ಯುವ ಬರಹಗಾರರಾಗಿದ್ದ ಮತ್ತೂರು ಕೃಷ್ಣಮೂರ್ತಿ ಅವರ ನೇಮಕವಾಯಿತು. ‘ಪ್ರಜಾವಾಣಿ’ ಬಿಟ್ಟು ಎಂ.ಎಸ್.ರಾಮಯ್ಯನವರ ‘ತಾಯಿನಾಡು’ ಸಮೂಹದ ‘ಗೋಕುಲ’ ವಾರಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಹಾಗೂ ಬಿ.ಎನ್.ಗುಪ್ತ ಅವರ ‘ಜನಪ್ರಗತಿ’ ವಾರಪತ್ರಿಕೆಯ ಸಂಪಾದಕರಾಗಿದ್ದ ಬಿ.ಶ್ರೀನಿವಾಸಮೂರ್ತಿ ‘ಸಂಕ’ಕ್ಕೆ ಬಂದರು. ಕಲೆ-ಸಾಹಿತ್ಯ-ಸಂಸ್ಕೃತಿ ಪುಟ/ಪುರವಣಿಗಳನ್ನು ನೋಡಿಕೊಳ್ಳಲು ‘ಪ್ರಜಾಮತ’ದಲ್ಲಿದ್ದ ಮಾ.ನಾ.ಚೌಡಪ್ಪನವರ ನೇಮಕವಾಯಿತು.

1959ರ ಜನವರಿ 26ರಂದು `ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ ಜಯಚಾಮರಾಜೆಂದ್ರ ಒಡೆಯರ್ ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು.

ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ ಸುರೇಂದ್ರ ದಾನಿ ಬೆಂಗಳೂರಿಗೆ ವರ್ಗಾವಣೆಗೊಂಡರು. ನರಸಿಂಹ ಜೋಶಿ ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ ಕಬ್ಬನ್ ಪಾರ್ಕ್ ನ ವಿಕ್ಟರಿ ಹಾಲ್‍ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು.

ಪಿ.ರಾಮಣ್ಣ, ವಿ.ಆರ್.ಶ್ಯಾಮ್ (ಇಂದಿರಾತನಯ), ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥರಾವ್, ಖಾದ್ರಿ ಎಸ್.ಅಚ್ಯುತನ್, ಕೆ.ಎಸ್.ನಾಗಭೂಷಣಂ, ಸೂ.ರಮಾಕಾಂತ, ಜಯರಾಮ ಅಡಿಗರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, ಪ್ರಹ್ಲಾದ ಕುಳಲಿ, ಕೆ.ರಾಜಾರಾವ್, ಎನ್.ಅರ್ಜುನದೇವ, ಸಿ.ಟಿ.ಜೋಶಿ, ಕೆ.ಜಯತೀರ್ಥರಾವ್, ಶೇಷಚಂದ್ರಿಕರಂಥ ವರದಿಗಾರರು `ಸಂಕ'ದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು ಎಸ್.ದೇವನಾಥ್, ಪಿ.ಸಿ.ಅಪ್ಪಾಜಿ, ಎಂ.ಎ.ಪೊನ್ನಪ್ಪ ಜತೆಗೂಡಿದರು. ಶ್ಯಾಮಸುಂದರ ಕುಲಕರ್ಣಿ ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು.

ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಟ್ರಸ್ಟ್ ನ ಧರ್ಮದರ್ಶಿಯಾಗಿದ್ದ ರಂಗನಾಥ ದಿವಾಕರ ಅವರು ತಮ್ಮ ಮಗ ಅನಂತ ದಿವಾಕರ ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು.

‘ಇಂಡಿಯನ್ ಎಕ್ಸ್‍ಪ್ರೆಸ್’ ಸಮೂಹದ ‘ಕನ್ನಡಪ್ರಭ’ ದಿನಪತ್ರಿಕೆಯೂ ‘ಪ್ರಜಾವಾಣಿ’ಯೊಂದಿಗೆ ‘ಸಂಯುಕ್ತ ಕರ್ನಾಟಕ’ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. ರಂಗನಾಥ ದಿವಾಕರ ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ 1974ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಆಪ್ತರಾಗಿದ್ದ ಸಚಿವ ಎಂ.ವೈ.ಘೋರ್ಪಡೆ ಅವರ ‘ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಮಾರಾಟ ಮಾಡಿದರು. ‘ಪ್ರಜಾವಾಣಿ’ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ ‘ಪ್ರಜಾವಾಣಿ’ಯ ಪ್ರಧಾನ ವರದಿಗಾರರಾಗಿದ್ದ ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ ಸೇರ್ಪಡೆಯಾದರು. ‘ಪ್ರಜಾವಾಣಿ’ಯ ಹಿರಿಯ ವರದಿಗಾರರಾಗಿದ್ದ ಕೆ.ಜನಾರ್ದನ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ ಕೆ.ಶಾಮರಾವ್ ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ ಸುರೇಂದ್ರ ದಾನಿ ಹುಬ್ಬಳ್ಳಿಗೆ ಮರಳಿದರು. ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.

ಟ್ರಸ್ಟ್‌ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು ಕೆ.ಶಾಮರಾವ್ ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು. ‘ಕರ್ಮವೀರ’ಕ್ಕೆ ಹೊಸರೂಪವನ್ನು ಕೊಡಲಾಯಿತು. ಜಿ.ಪಿ.ಬಸವರಾಜು, ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್, ಆರ್.ನರಸಿಂಹ, ಸರಜೂ ಕಾಟ್ಕರ, ಎನ್.ಗಾಯತ್ರಿದೇವಿ ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಕಾಗಿರಲಿಲ್ಲ. ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು.

ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. ಕೆ.ಎಸ್.ರಾಮಕೃಷ್ಣಮೂರ್ತಿಯವರ ನಿಧನದಿಂದ ತೆರವಾದ ‘ಕನ್ನಡಪ್ರಭ’ಸಂಪಾದಕರ ಸ್ಥಾನಕ್ಕೆ ಖಾದ್ರಿ ಶಾಮಣ್ಣ ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ ‘ಪ್ರಜಾಪ್ರಭುತ್ವ’ವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ ಪ.ಸು.ಭಟ್ಟ `ಸಂಕ' ಸಮೂಹದ ಸಂಪಾದಕರಾದರು. ‘ಚಿತ್ರದೀಪ’ವೆಂಬ ಸಿನಿಮಾ ಪತ್ರಿಕೆಯನ್ನೂ ಆರ್.ನರಸಿಂಹ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.

ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ‘ರಾವಬಹಾದ್ದೂರ’ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ `ಸಂಕ'ದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31-01-1980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ‘ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್)’ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ ಮತ್ತೀಹಳ್ಳಿ ನಾಗರಾಜರಾವ್ ಅವರದಾಯಿತು.

ಬಹು ಹಿಂದೆ ಆರಂಭಗೊಂಡಿದ್ದ ‘ಸಂಯುಕ್ತ ಕರ್ನಾಟಕ ನೌಕರರ ಸಂಘ’ ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, ಕೋಡಿಹೊಸಳ್ಳಿ ರಾಮಣ್ಣ ನೇತೃತ್ವದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವೂ ಹಕ್ಕೊತ್ತಾಯದ ಹೋರಾಟ ನಡೆಸಿತು. ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ವೀರಪ್ಪ ಮೊಯ್ಲಿ ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶ ಹೊರಡಿಸಿತು.


Sunday, May 31, 2009

Reader Writes on RKN's "Painter of Signs"
Mr. HR Nagesha Rao was an ardent fan of RK Narayan. And ofcourse he has been reading Illustrated Weekly of India without fail. I had the privilege of bringing home the magazines like Weekly, Femina, Filmfare, Shankar’s Weekly, Blitz and Current from M/s. Nandana News Agency, Opp. To NMH in Vishveswarapura, a walkable distance from Journalists’ Colony. In addition to these magazines, I remember to have seen subscriber’s copies of Readers’ Digest, Mirror and Hi being received at home by post. He used to get the books of his choice written by Khushwant Singh, Manohar Mulgaonkar, RK Narayan etal through VPP. During 1976 he shoots an inland letter to the Editor of the Weekly about his disappointments after reading a serialized novel of RKN.
To
The Editor
“Illustrated Weekly of India”
“READERS’ WRITE”
Bombay –1

Dear Sir,

Re: PAINTER OF SIGNS

What an abrupt end to an absorbing, interesting and witty story by Sri R.K.Narayan? Were you not prepared to provide space for the serial for some more weeks or was the author afraid that if Raman and Daisy were made to live together, the heroine of family planning might herself end with a babe in her arms! Or they would have to seek merely divorce on account of their incompatible temperaments and possible encounters on their way, the “brave” Daisy turned out to be an escapist – infirm in her decisions and designs and an inhuman being quite unconcerned with the fate of the person who sacrificed his chastity and also has deserted his aunt for her sake. We should only hope that in her next escapade in Nilgiris, she will not entice some innocent hermit there and spoil his fruits of penance.
My heartfelt sympathies to the “Painter of Signs” who succumbed to the wiles of a slogan shooter and was finally left in a lurch – as “athO bhrashTa, tathO bhrashTa! This should not have happened to a novel penned by an illustrious Narayan!

HR Nagesha Rao
06/10/1976